ವಿವಾದದ ಹೊಗೆಯಲ್ಲೇ ಬೆಳಗಿದ ರಾಷ್ಟ್ರೀಯ ಕ್ರೀಡಾಜ್ಯೋತಿ
ಬೆಂಗಳೂರು, ಮೇ 31– ಆತಿಥೇಯ ಕ್ರೀಡಾಪಟುಗಳ ಅಸಮಾಧಾನದ ಹೊಗೆಯಲ್ಲೇ ಕ್ರೀಡಾಜ್ಯೋತಿ ಬೆಳಗಿದ ನಂತರ ಅದ್ಧೂರಿಯ ಸಮಾರಂಭದ ಮಧ್ಯೆ ರಾಷ್ಟ್ರಪತಿ ಡಾ. ಶಂಕರ ದಯಾಳ ಶರ್ಮಾ, ನಾಲ್ಕನೇ ರಾಷ್ಟ್ರೀಯ ಕ್ರೀಡೆಗಳನ್ನು ಇಂದು ಸಂಜೆ ಉದ್ಘಾಟಿಸಿದರು.
ಕಂಠೀರವ ಕ್ರೀಡಾಂಗಣದಲ್ಲಿ ಮಧ್ಯಾಹ್ನ ದಿಂದಲೇ ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರಿಗೆ ತೀರ ನಿರಾಶೆಯೇನೂ ಆಗಲಿಲ್ಲ. ಆರಂಭದಲ್ಲಿ ಕೆಲವು ಕಾರ್ಯಕ್ರಮಗಳು ನೀರಸವಾಗಿದ್ದರೂ ಕ್ರಮೇಣ ಕಾವೇರಿತು. ಡಾ. ರಾಜಕುಮಾರರ ‘ಕ್ರೀಡಾಮೇಳ, ಚೇತನಶೀಲ’ ಹಾಡಿಗೆ ಜನ ತಾಳ ಹಾಕಿದರು. ಮನರಂಜನಾ ಕಾರ್ಯಕ್ರಮಗಳು ಜನರನ್ನು ಕೊನೆಯವರೆಗೂ ಕ್ರೀಡಾಂಗಣದಲ್ಲಿ ಇರುವಂತೆ ಮಾಡಿದವು. ರಾಜಕಾರಣಿಗಳ ಭಾಷಣ ಯಾರಿಗೂ ಸರಿಯಾಗಿ ಕೇಳದಿದ್ದುದರ ಜೊತೆಗೆ ಜನರಿಗೆ ಅದರಲ್ಲಿ ಆಸಕ್ತಿಯೂ ಇದ್ದಂತಿರಲಿಲ್ಲ.
ಮೊಳಕಾಲ್ಮುರು: ಕಾಂಗ್ರೆಸ್ಗೆ ಜಯ
ಚಿತ್ರದುರ್ಗ, ಮೇ 31– ಇಡೀ ರಾಜ್ಯದ ಗಮನ ಸೆಳೆದ ಮತ್ತು ರಾಜಕೀಯ ವಲಯದಲ್ಲಿ ತೀವ್ರ ಆಸಕ್ತಿ ಕೆರಳಿಸಿದ್ದ ಮೊಳಕಾಲ್ಮುರು ವಿಧಾನಸಭೆ ಕ್ಷೇತ್ರ ಕಾಂಗ್ರೆಸ್ ಪಾಲಾಗಿದೆ. ಆ ಪಕ್ಷದ ಅಭ್ಯರ್ಥಿ ಎನ್.ವೈ.ಗೋಪಾಲಕೃಷ್ಣ ಅವರು ಜನತಾದಳದ ಪಟೇಲ್ ಜಿ.ಎಂ.ತಿಪ್ಪೇಸ್ವಾಮಿ ವಿರುದ್ಧ12107 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.
ದಳದ ಶಾಸಕರಾಗಿದ್ದ ಪೂರ್ಣಮುತ್ತಪ್ಪ ಅವರ ನಿಧನದಿಂದಾಗಿ ಇಲ್ಲಿ ಉಪಚುನಾವಣೆ ನಡೆದಿತ್ತು.
ರಾಜ್ಯದ ಪ್ರಮುಖ ವಿರೋಧ ಪಕ್ಷವಾದ ಬಿಜೆಪಿ ಅಭ್ಯರ್ಥಿ ಮತ್ತು ಇತರ ಇಬ್ಬರು ಪಕ್ಷೇತರರು ಠೇವಣಿ ಕಳೆದುಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.