ADVERTISEMENT

ಶುಕ್ರವಾರ, 16–9–1994

1994

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2019, 19:48 IST
Last Updated 15 ಸೆಪ್ಟೆಂಬರ್ 2019, 19:48 IST

ಅಲಹಾಬಾದ್ ಘಟನೆ– ಸಿಬಿಐ ತನಿಖೆಗೆ ಕೋರ್ಟ್ ಆದೇಶ

ನವದೆಹಲಿ, ಸೆ. 15 (ಯುಎನ್‌ಐ)– ಆಡಳಿತ ಪಕ್ಷಗಳ ಕೂಟದ ಕರೆಯಂತೆ ಮಂಗಳವಾರ ನಡೆದ ಉತ್ತರ ಪ್ರದೇಶ ಬಂದ್ ದಿನ ಮೀಸಲಾತಿ ಪರ ಜನರ ಗುಂಪು ಪೊಲೀಸರ ಕುಮ್ಮಕ್ಕಿನಿಂದ ಅಲಹಾಬಾದ್ ಹೈಕೋರ್ಟ್ ಆವರಣದಲ್ಲಿ ನಡೆಸಿತೆನ್ನಲಾದ ದುಂಡಾವರ್ತಿಯ ಬಗ್ಗೆ ನ್ಯಾಯಾಲಯದ ಆಯುಕ್ತರಾಗಿ ತನಿಖೆ ನಡೆಸುವಂತೆ ಸಿಬಿಐ ನಿರ್ದೇಶಕ ಕೆ. ವಿಜಯರಾಮರಾವ್ ಅವರಿಗೆ ಸುಪ್ರೀಂ ಕೋರ್ಟ್ ಇಂದು ಆದೇಶಿಸಿತು.

ಇನ್ನು ಏಳು ದಿನಗಳ ಒಳಗಾಗಿ ವರದಿಯನ್ನು ಸಲ್ಲಿಸುವಂತೆ ಸಿಬಿಐ ನಿರ್ದೇಶಕರಿಗೆ ಕೋರ್ಟ್ ಆದೇಶಿಸಿದ್ದು ಸೆ. 22ರಂದು ಮತ್ತೆ ವಿಚಾರಣೆ ನಡೆಯಲಿದೆ. ಹೈಕೋರ್ಟ್, ಅದರ ನ್ಯಾಯಾಧೀಶರು ಮತ್ತು ಸಿಬ್ಬಂದಿಯನ್ನು ರಕ್ಷಿಸುವ ತಮ್ಮ ಸಂವೈಧಾನಿಕ ಕರ್ತವ್ಯದ ಪಾಲನೆಯಲ್ಲಿ ವಿಫಲರಾಗಿರುವ ಅಧಿಕಾರಿಗಳ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳುವ ಮುನ್ನ ನಡೆದ ವಿದ್ಯಮಾನಗಳ ಬಗ್ಗೆ ಸಂಪೂರ್ಣ ವರದಿಯನ್ನು ಪಡೆಯುವುದು ಅಗತ್ಯ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ADVERTISEMENT

ಮೀಸಲಾತಿ: ಮತ್ತೆ ಸರ್ವಪಕ್ಷ ಸಭೆ

ಕೃಷ್ಣರಾಜಸಾಗರ, ಸೆ. 15– ‘ಶನಿವಾರ ಕರೆದಿರುವ ಸಭೆಯಲ್ಲಿ ಭಾಗವಹಿಸಿ ಸರ್ಕಾರದ ಉದ್ದೇಶಿತ ಮೀಸಲಾತಿಯ ನೀತಿಗೆ ಬೆಂಬಲ ತೋರಿಸದಿದ್ದರೆ ವಿರೋಧ ಪಕ್ಷಗಳು ಹಿಂದುಳಿದ ವರ್ಗಗಳ ಬಗ್ಗೆ ತಾಳಿರುವುದು ಮೊಸಳೆ ಕಣ್ಣೀರು ಎಂದು ಭಾವಿಸಬೇಕಾಗುತ್ತದೆ’ ಎಂದು ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಅವರು ಪ್ರತಿಪಕ್ಷಗಳ ನಾಯಕರಿಗೆ ಕಿವಿಮಾತು ಹೇಳಿದರು.

‘ಹಿಂದುಳಿದವರಿಗೆ ಮೀಸಲಾತಿ ಒದಗಿಸುವುದು ಸಾಮಾಜಿಕ ಬದ್ಧತೆಯಿಂದ ತಾಳಬೇಕಾದ ನಿಲುವು’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಏಕಕಾಲದ ಸಂದರ್ಶನ– ವಿದ್ಯಾರ್ಥಿಗೆ ಸಂಕಟ

ಬೆಂಗಳೂರು, ಸೆ. 15– ಎಂಜಿನಿಯರಿಂಗ್, ವೈದ್ಯಕೀಯ ಹಾಗೂ ದಂತ ವೈದ್ಯ ಸೀಟುಗಳಿಗೆ ಏಕಕಾಲದಲ್ಲಿ ಸಂದರ್ಶನ ನಡೆಯಲಿರುವುದು ಹಾಗೂ ಒಂದು ಸಂದರ್ಶನಕ್ಕೆ ಹಾಜರಾಗುವಾಗ ಇನ್ನೊಂದು ವಿಭಾಗದ ಸೀಟು ಲಭ್ಯತೆ ವಿಷಯ ಅನಿಶ್ಚಿತವಾಗಿರುವುದು ವಿದ್ಯಾರ್ಥಿಗಳಿಗೆ ಉಭಯ ಸಂಕಟ ಸೃಷ್ಟಿಸಿದೆ.

ಎಂಜಿನಿಯರಿಂಗ್, ವೈದ್ಯಕೀಯ ಅಥವಾ ದಂತ ವೈದ್ಯ ಈ ಯಾವುದೇ ಒಂದು ಕೋರ್ಸ್‌ನಲ್ಲಿ ಸೀಟು ‘ಅಲಾಟ್’ ಆಗಿ, ಶುಲ್ಕ ಕಟ್ಟಿದ ಮೇಲೆ ವಿದ್ಯಾರ್ಥಿ ಮಿಕ್ಕೆರಡು ಕೋರ್ಸ್‌ಗಳಿಗೆ ಸೇರಲು ಅನರ್ಹ.

ಈ ನಿಯಮದಿಂದ ಮೂರೂ ಕೋರ್ಸ್‌ಗಳಲ್ಲಿ ಸೀಟು ಖಚಿತವಾದ ಅಥವಾ ಸೀಟು ಗಳಿಸುವ ಸಾಧ್ಯತೆಯುಳ್ಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಭಾರೀ ಹಾನಿ ನಿಶ್ಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.