ಶೇ 73 ಮೀಸಲು: ಪ್ರತಿಪಕ್ಷದ ಗೈರುಹಾಜರಿಯಲ್ಲಿ ಸದನ ಅಸ್ತು
ಬೆಂಗಳೂರು, ಸೆ. 20– ಪರಿಶಿಷ್ಟರು ಹಾಗೂ ಹಿಂದುಳಿದವರಿಗೆ ಶಿಕ್ಷಣ, ಉದ್ಯೋಗದಲ್ಲಿ ಶೇಕಡ 73ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆಗೆ ಇಂದು ಸರ್ವಾನುಮತದ ಒಪ್ಪಿಗೆ ನೀಡಿದ ವಿಧಾನ ಮಂಡಲದ ಉಭಯ ಸದನಗಳು, ಈ ಮೀಸಲು ನೀತಿ ಜಾರಿಗೆ ತರಲು ಸಾಧ್ಯವಾಗುವಂತೆ ಸಂವಿಧಾನಕ್ಕೆ ಸೂಕ್ತ ತಿದ್ದುಪಡಿ ತರಬೇಕೆಂದು ಕೇಂದ್ರಕ್ಕೆ ಮನವಿ ಮಾಡುವ ನಿರ್ಣಯವನ್ನೂ ಅಂಗೀಕರಿಸಿದವು.
ಮೀಸಲು ಸಂಬಂಧದಲ್ಲಿ ಕರೆದಿದ್ದ ಈ ವಿಶೇಷ ಅಧಿವೇಶನವನ್ನು ಬಹಿಷ್ಕರಿಸಿದ ಪ್ರಮುಖ ವಿರೋಧ ಪಕ್ಷಗಳಾದ ಜನತಾದಳ, ಭಾರತೀಯ ಜನತಾ ಪಕ್ಷದ ಗೈರುಹಾಜರಿಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು. ಎರಡೂ ಸದನಗಳಲ್ಲಿ ಸಮಾಜ ಕಲ್ಯಾಣ ಸಚಿವ ಕಾಗೋಡು ತಿಮ್ಮಪ್ಪ ಅವರು ಸಂವಿಧಾನ ತಿದ್ದುಪಡಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ನಿರ್ಣಯ ಮಂಡಿಸಿದರು.
ಅಯೋಧ್ಯೆ ವಿವಾದ: ಕಾಯ್ದಿಟ್ಟ ತೀರ್ಪು
ನವದೆಹಲಿ, ಸೆ. 20 (ಯುಎನ್ಐ, ಪಿಟಿಐ)– ಆಯೋಧ್ಯೆ ವಿವಾದ ಕುರಿತಂತೆ ರಾಷ್ಟ್ರಪತಿಗಳ ಪ್ರಸ್ತಾವದ ‘ಅರ್ಹತೆ’ ಮತ್ತು ಅಯೋಧ್ಯೆ ಭೂ ಸ್ವಾಧೀನ ಕಾಯ್ದೆ ಕ್ರಮಬದ್ಧತೆ ಬಗ್ಗೆ ಸುಪ್ರೀಂ ಕೋರ್ಟ್ ಇಂದು ತನ್ನ ತೀರ್ಪನ್ನು ಕಾಯ್ದಿರಿಸಿತು.
ಅಯೋಧ್ಯೆಯ ವಿವಾದಾತ್ಮಕ ನಿವೇಶನದಲ್ಲಿ ಬಾಬರಿ ಮಸೀದಿಗೆ ಮೊದಲು ಹಿಂದೂ ದೇವಾಲಯ ಅಥವಾ ಹಿಂದೂ ಕಟ್ಟಡವಿತ್ತೇ ಎಂಬ ವಿಷಯದಲ್ಲಿ ಅಭಿಪ್ರಾಯ ನೀಡುವಂತೆ ರಾಷ್ಟ್ರಪತಿಗಳು ಸಂವಿಧಾನದ 143 (1) ವಿಧಿಯ ಪ್ರಕಾರ ಸುಪ್ರೀಂ ಕೋರ್ಟ್ ಅನ್ನು ಕೋರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.