ADVERTISEMENT

25 ವರ್ಷದ ಹಿಂದೆ | ನಾಲ್ವರು ಸಚಿವರು, 10 ಮಾಜಿ ಶಾಸಕರಿಗೆ ಕೊಕ್

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2024, 23:30 IST
Last Updated 21 ಆಗಸ್ಟ್ 2024, 23:30 IST
<div class="paragraphs"><p>25 ವರ್ಷದ ಹಿಂದೆ</p></div>

25 ವರ್ಷದ ಹಿಂದೆ

   

ನಾಲ್ವರು ಸಚಿವರು, 10 ಮಾಜಿ ಶಾಸಕರಿಗೆ ಕೊಕ್

ಬೆಂಗಳೂರು, ಆ. 21– ಜನತಾದಳ ವಿಭಜನೆಯ ಸಂದರ್ಭದಲ್ಲಿ ಜೆ.ಎಚ್. ಪಟೇಲ್ ಅವರ ಜತೆ ಗುರುತಿಸಿಕೊಂಡಿದ್ದ ನಾಲ್ವರು ಸಚಿವರು ಸೇರಿದಂತೆ ವಿಸರ್ಜಿತ ವಿಧಾನಸಭೆಯ ದಳದ ಒಟ್ಟು 14 ಮಂದಿ ಸದಸ್ಯರಿಗೆ ಮತ್ತೆ ಸ್ಪರ್ಧಿಸಲು ಟಿಕೆಟ್ ನಿರಾಕರಿಸಲಾಗಿದೆ.

ಬಿಜೆಪಿ ಮತ್ತು ದಳ (ಯು) ನಡುವೆ ಆಗಿರುವ ಚುನಾವಣಾ ಹೊಂದಾಣಿಕೆ ಪ್ರಕಾರ, ವಿಸರ್ಜಿತ ವಿಧಾನಸಭೆಯಲ್ಲಿ ದಳದ ಸದಸ್ಯರು ಪ್ರತಿನಿಧಿಸುತ್ತಿದ್ದ 12 ಕ್ಷೇತ್ರಗಳು ಬಿಜೆಪಿ ಪಾಲಾಗಿದ್ದರೆ, ಇನ್ನೆರಡು ಕ್ಷೇತ್ರಗಳು ದಳ (ಯು)ಕ್ಕೆ ದೊರೆತರೂ ಆ ಕ್ಷೇತ್ರಗಳ ಟಿಕೆಟ್ ಬೇರೆಯವರ ಪಾಲಾಗಿದೆ.

ADVERTISEMENT

ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಲೀಲಾದೇವಿ ಆರ್. ಪ್ರಸಾದ್ (ಅಥಣಿ) ಮತ್ತು ಅಬಕಾರಿ ಸಚಿವ ಪಿ.ಎಸ್.ಜೈವಂತ್ (ಶಿರಸಿ) ಅವರ ಕ್ಷೇತ್ರಗಳು ಬಿಜೆಪಿ ಪಾಲಾಗಿದ್ದರೆ, ಮಾಹಿತಿ ತಂತ್ರಜ್ಞಾನ ಸಚಿವ ಅನಂತನಾಗ್ (ಮಲ್ಲೇಶ್ವರ) ಮತ್ತು ಗ್ರಾಮೀಣ ಅಭಿವೃದ್ಧಿ ಸಚಿವ ಎಂ.ಸಿ. ಮನಗೂಳಿ (ಸಿಂದಗಿ) ಅವರ ಕ್ಷೇತ್ರಗಳು ದಳ (ಯು)ಕ್ಕೆ ದಕ್ಕಿದ್ದರೂ, ಈ ಎರಡು ಕ್ಷೇತ್ರಗಳಲ್ಲಿ ಅವರ ಬದಲಿಗೆ ಲೋಕಶಕ್ತಿ ಮೂಲದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ.

ಸೋನಿಯಾ, ಸುಷ್ಮಾ ಸೇರಿ 72 ಮಂದಿ ಲೋಕಸಭೆ ಕಣದಲ್ಲಿ

ಬೆಂಗಳೂರು, ಆ. 21– ಲೋಕಸಭೆಗೆ ಸೆಪ್ಟೆಂಬರ್ ಐದರಂದು ನಡೆಯಲಿರುವ ಮೊದಲ ಹಂತದ ಚುನಾವಣೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಬಿಜೆಪಿಯ ನಾಯಕಿ ಸುಷ್ಮಾ ಸ್ವರಾಜ್, ಕೇಂದ್ರ ಸಚಿವ ಅನಂತಕುಮಾರ್, ಮಾಜಿ ಸಚಿವರಾದ ಆರ್‌.ಎಲ್‌. ಜಾಲಪ್ಪ, ಎಂ.ವಿ. ಚಂದ್ರಶೇಖರ ಮೂರ್ತಿ ಹಾಗೂ ಎಚ್‌.ಡಿ. ಕುಮಾರಸ್ವಾಮಿ ಸೇರಿದಂತೆ ಒಟ್ಟು 72 ಮಂದಿ ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ.

ಅದೇ ದಿನ ರಾಜ್ಯ ವಿಧಾನಸಭೆಯ 120 ಕ್ಷೇತ್ರಗಳಿಗೆ ನಡೆಯುವ ಚುನಾವಣೆಗೆ ಮುಖ್ಯಮಂತ್ರಿ ಜೆ.ಎಚ್. ಪಟೇಲ್ (ಚನ್ನಗಿರಿ), ಸಚಿವರಾದ ಬಿ. ಸೋಮಶೇಖರ್ (ಮಳವಳ್ಳಿ), ಸಿ. ಬೈರೇಗೌಡ (ವೇಮಗಲ್), ಎಂ.ಪಿ. ಪ್ರಕಾಶ್ (ಹೂವಿನಹಡಗಲಿ), ಪಿ.ಜಿ.ಆರ್. ಸಿಂಧ್ಯ (ಕನಕಪುರ), ಜನತಾದಳದ (ಯು) ಡಾ. ಜೀವರಾಜ ಆಳ್ವ (ಜಯಮಹಲ್), ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ (ಗುರುಮಿಠಕಲ್), ಧರ್ಮಸಿಂಗ್ (ಜೇವರ್ಗಿ) ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಹಲವಾರು ಘಟಾನುಘಟಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.