ಮುಂದಿನ ತಿಂಗಳು ಭಾರತ– ಪಾಕ್ ಪ್ರಧಾನಿಗಳ ಮಾತುಕತೆ ನಿರೀಕ್ಷೆ
ಇಸ್ಲಾಮಾಬಾದ್, ಜೂನ್ 6 (ಪಿಟಿಐ)– ದಕ್ಷಿಣ ಏಷ್ಯದಲ್ಲಿನ ಶಸ್ತ್ರಾಸ್ತ್ರ ಪೈಪೋಟಿಗೆ ಸಂಬಂಧಿಸಿದಂತೆ ಮಾತುಕತೆಗೆ ಪಾಕ್ ಪ್ರಧಾನಿ ಅವರು ನೀಡಿರುವ ಆಹ್ವಾನವನ್ನು ಭಾರತದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಸ್ವಾಗತಿಸಿದ್ದಾರೆ. ಮುಂದಿನ ತಿಂಗಳು ಶ್ರೀಲಂಕಾದ ಕೊಲಂಬೊದಲ್ಲಿ ನಡೆಯುವ ಸಾರ್ಕ್ ದೇಶಗಳ ಸಮಾವೇಶದಲ್ಲಿ ಉಭಯ ದೇಶಗಳ ಪ್ರಧಾನಿಗಳು ಮಾತುಕತೆ ನಡೆಸುವ ಸಾಧ್ಯತೆ ಇದೆ.
ಎರಡೂ ದೇಶಗಳು ಅಣ್ವಸ್ತ್ರ ಪರೀಕ್ಷೆ ನಡೆಸಿದ ನಂತರ ಉಂಟಾಗಿರುವ ಬಿಕ್ಕಟ್ಟು ಪರಿಹಾರಕ್ಕೆ ಈ ಮಾತುಕತೆ ನೆರವಾಗಬಹುದೆಂದು ಭಾವಿಸಲಾಗಿದೆ. ಸಾರ್ಕ್ ಸಮ್ಮೇಳನದ ಸಮಯದಲ್ಲಿ ಸಾಧಾರಣವಾಗಿ ಎರಡೂ ದೇಶದ ಪ್ರಧಾನಿಗಳು ಮಾತುಕತೆ ನಡೆಸುತ್ತಾರೆ ಎಂದು ಪಾಕ್ ವಿದೇಶಾಂಗ ಸಚಿವಾಲಯದ ವಕ್ತಾರ ತಾರಿಖ್ ಅಲ್ತಾಫ್ ಅವರು ತಿಳಿಸಿದರು.
ರಾಮ ಮಂದಿರ ನಿರ್ಮಾಣ: ಭರದ ಸಿದ್ಧತೆ– ವಿಎಚ್ಪಿ
ನವದೆಹಲಿ, ಜೂನ್ 6 (ಪಿಟಿಐ): ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಾಣ ಮಾಡಲು ಭರದ ಸಿದ್ಧತೆ ನಡೆದಿದ್ದು, ಸುಪ್ರೀಂಕೋರ್ಟ್ ಸೇರಿದಂತೆ ಭೂಮಿಯಲ್ಲಿನ ಯಾವುದೇ ಶಕ್ತಿ ಅದನ್ನು ತಡೆಗಟ್ಟಲು ಸಾಧ್ಯವಿಲ್ಲ ಎಂದು ವಿಶ್ವ ಹಿಂದು ಪರಿಷತ್ತಿನ (ವಿಎಚ್ಪಿ) ಪ್ರಧಾನ ಕಾರ್ಯದರ್ಶಿ ಆಚಾರ್ಯ ಗಿರಿರಾಜ ಕಿಶೋರ್ ಅವರು ಹೇಳಿದ್ದಾರೆ.
ಇಂಗ್ಲಿಷ್ ನಿಯತಕಾಲಿಕ ‘ಔಟ್ ಲುಕ್’ಗೆ ನೀಡಿದ ಸಂದರ್ಶನದಲ್ಲಿ ಅವರು ರಾಮ ಮಂದಿರ ನಿರ್ಮಾಣಕ್ಕಾಗಿ ಶಿಲೆಯ ಕೆತ್ತನೆ ಮತ್ತು ಕಲ್ಲು ಕತ್ತರಿಸುವ ಕಾರ್ಯ ಅಯೋಧ್ಯೆಯಲ್ಲಿ ಆರಂಭವಾಗಿದ್ದು ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿದೆ, ಮಂದಿತ ನಿರ್ಮಾಣವನ್ನು ಎರಡು ವರ್ಷಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದರೆಂದು ನಿಯತಕಾಲಿಕೆ ನೀಡಿರುವ ವರದಿಯಲ್ಲಿ ತಿಳಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.