ADVERTISEMENT

25 ವರ್ಷಗಳ ಹಿಂದೆ: ಸೋಮವಾರ, 21–8–1995

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2020, 20:15 IST
Last Updated 20 ಆಗಸ್ಟ್ 2020, 20:15 IST
   

ಅಸೂಯೆಯಿಂದ ರಾಜ್ಯಕ್ಕೆ ತಪ್ಪಿದ ಪ್ರಧಾನಿ ಪಟ್ಟ
ಬೆಂಗಳೂರು, ಆ. 20–
‘ರಾಜ್ಯದ ರಾಜಕಾರಣಿಗಳಲ್ಲಿರುವ ಅಸೂಯೆ ಮತ್ತು ಪರಸ್ಪರ ಕಾಲೆಳೆಯುವ ಪ್ರವೃತ್ತಿಯಿಂದಾಗಿ ಇದುವರೆಗೆ ಕರ್ನಾಟಕದ ಒಬ್ಬರಿಗೂ ದೇಶದ ಪ್ರಧಾನಿಯಾಗುವ ಅವಕಾಶ ದೊರೆತಿಲ್ಲ’ ಎಂದು ಜನತಾ ದಳದ ಹಿರಿಯ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಇಂದು ಇಲ್ಲಿ ವಿಷಾದಿಸಿದರು.

‘ದೇಶದ ಪ್ರಧಾನಮಂತ್ರಿಯಾಗುವ ಸಾಧ್ಯತೆಯುಳ್ಳ ಹಲವಾರು ಮುತ್ಸದ್ದಿ ರಾಜಕಾರಣಿಗಳನ್ನು ರಾಜ್ಯ ಇದುವರೆಗೆ ಕಂಡಿದೆ. ಕೆಂಗಲ್‌ ಹನುಮಂತಯ್ಯ, ದೇವರಾಜಅರಸು ಅವರಂಥ ಮುತ್ಸದ್ದಿಗಳಿಗೆ ದೇಶದ ಪ್ರಧಾನಿಯಾಗುವ ಎಲ್ಲ ಸಾಮರ್ಥ್ಯ–ಅರ್ಹತೆಗಳು ಇದ್ದವು. ಆದರೆ, ರಾಜ್ಯದವರೇ ಅವರ ಬಗ್ಗೆ ಅಸೂಯೆಪಟ್ಟು ಅವರ ರಾಜಕೀಯ ಹಾದಿಗೆ ಅಡ್ಡ ಬಂದುದರಿಂದ ಪ್ರಧಾನಮಂತ್ರಿಯಾಗುವ ಅವಕಾಶಗಳು ಅವರಿಗೆ ತಪ್ಪಿಹೋದವು’ ಎಂದರು.

ಫಿರೋಜಾಬಾದ್‌ ಬಳಿರೈಲುಗಳ ಡಿಕ್ಕಿ: 275 ಸಾವು
ನವದೆಹಲಿ, ಆ. 20 (ಪಿಟಿಐ, ಯುಎನ್‌ಐ)–
ದೆಹಲಿಗೆ ಬರುತ್ತಿದ್ದ ಸೂಪರ್‌ ಫಾಸ್ಟ್‌ ಪುರುಷೋತ್ತಮ ಎಕ್ಸ್‌ಪ್ರೆಸ್‌ ರೈಲು ಇಂದು ಬೆಳಗಿನ ಜಾವ ಆಗ್ರಾದಿಂದ ಸುಮಾರು 100 ಕಿ.ಮೀ ದೂರದ ಫಿರೋಜಾಬಾದ್‌ ಬಳಿ ನಿಲ್ದಾಣಕ್ಕಿಂತ ಕೊಂಚ ಮುಂದೆ ನಿಂತಿದ್ದ ಫರೂಕಾಬಾದ್‌–ದೆಹಲಿ ಕಾಳಿಂದಿ ಎಕ್ಸ್‌ಪ್ರೆಸ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿ ಕನಿಷ್ಠ 275 ಮಂದಿ ಅಸು ನೀಗಿದ್ದು, 400ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.

ADVERTISEMENT

ಉರುಳಿ ಬಿದ್ದ ಎಂಜಿನ್‌ ಮತ್ತು ಬೋಗಿಗಳನ್ನು ಎತ್ತಿ ಪರಿಹಾರ ಕಾರ್ಯ ಆರಂಭಿಸಿದ ಬಳಿಕ ಸತ್ತವರ ಸಂಖ್ಯೆ ನಿಖರವಾಗಿ ಗೊತ್ತಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.