ಪೆಟ್ರೋಲ್, ಡೀಸೆಲ್ ಮೇಲೆ ಸೆಸ್ ಶೀಘ್ರ ಸುಗ್ರೀವಾಜ್ಞೆ
ನವದೆಹಲಿ, ಜೂನ್ 12 (ಪಿಟಿಐ)– ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಸುಧಾರಣೆಗೆ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಸೆಸ್ ವಿಧಿಸಿ ವಾರ್ಷಿಕ 6 ಸಾವಿರ ಕೋಟಿ ರೂಪಾಯಿ ಸಂಗ್ರಹಣೆಯ ಕೇಂದ್ರ ರಸ್ತೆ ನಿಧಿ ಸ್ಥಾಪಿಸಲು ಕೇಂದ್ರವು ಈ ಕುರಿತ ಸುಗ್ರೀವಾಜ್ಞೆ ಯನ್ನು ಶೀಘ್ರವೇ ಹೊರಡಿಸಲಿದೆ.
ಈ ಸಂಬಂಧ ಮಸೂದೆಯನ್ನು ರೂಪಿಸುವುದು ವಿಳಂಬದ ಪ್ರಕ್ರಿಯೆಯಾಗು ವುದರಿಂದ ಕಳೆದ ಸಂಸತ್ ಅಧಿವೇಶನದಲ್ಲಿ ಮಸೂದೆ ಮಂಡಿಸುವ ಯತ್ನ ನಡೆಸಲಿಲ್ಲ. ಸುಗ್ರೀವಾಜ್ಞೆ ಮೂಲಕ ನಿಧಿಯನ್ನು ಸ್ಥಾಪಿಸುವ ಕುರಿತಂತೆ ಕೇಂದ್ರ ಸಂಪುಟದಲ್ಲಿ ಶೀಘ್ರವೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭೂ ಸಾರಿಗೆ ಸಚಿವ ರಾಜನಾಥ್ ಸಿಂಗ್ ಅವರು, ಇಂದು ಇಲ್ಲಿ ನಡೆದ ರಾಜ್ಯ ಲೋಕೋಪಯೋಗಿ ಸಚಿವರ ಎರಡನೇ ಸಮ್ಮೇಳನದಲ್ಲಿ ಹೇಳಿದರು.
ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಒಂದು ರೂಪಾಯಿ ಸೆಸ್ ವಿಧಿಸಲಾಗುವುದು. ಇದರಿಂದ ವಾರ್ಷಿಕ 6 ಸಾವಿರ ಕೋಟಿ ರೂಪಾಯಿ ಸಂಗ್ರಹಣೆಯಾಗಲಿದೆ ಎಂದು ಅವರು ಹೇಳಿದರು.
ನ್ಯಾಯಾಲಯದ ಆವರಣದಲ್ಲೇ ಆರೋಪಿ ಆತ್ಮಹತ್ಯೆ
ಬೆಂಗಳೂರು, ಜೂನ್ 12– ವಿಲ್ಸನ್ ಗಾರ್ಡನ್ನ ಕರ್ತವ್ಯನಿರತ ಸಂಚಾರ ಪೊಲೀಸ್ ಕಾನ್ಸ್ಟೆಬಲ್ ಒಬ್ಬರನ್ನು ಇತ್ತೀಚೆಗೆ ಲಾರಿ ಹರಿಸಿ ಸಾಯಿಸಿದ ಆರೋಪದ ಮೇಲೆ ಪೊಲೀಸ್ ಬಂಧನದಲ್ಲಿದ್ದ ಲಾರಿ ಚಾಲಕ ನ್ಯಾಯಾಲಯದ ಆವರಣದಲ್ಲಿ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಶಬ್ಬೀರ್ ಅಲಿಯಾಸ್ ರಮೇಶ್ ಎಂಬ ಈತ, ಇಂದು ಮಧ್ಯಾಹ್ನ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ 3ನೇ ಮಹಡಿಯಿಂದ ಕೆಳಕ್ಕೆ ಹಾರಿದ. ತೀವ್ರವಾಗಿ ಗಾಯಗೊಂಡಿದ್ದ ಈತ ವಿಕ್ಟೋರಿಯ ಆಸ್ಪತ್ರೆ ಯಲ್ಲಿ ಮೃತನಾದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.