ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ: ಶನಿವಾರ 23.3.1996

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2021, 19:30 IST
Last Updated 22 ಮಾರ್ಚ್ 2021, 19:30 IST
   

ರಾಷ್ಟ್ರೀಯ ರಂಗ ಇನ್ನೂ ಅಸ್ಪಷ್ಟ ರಾಜ್ಯದಲ್ಲಿ ಕಾಂಗೈ– ಕೆಸಿಪಿ ಮೈತ್ರಿ

ನವದೆಹಲಿ, ಮಾರ್ಚ್ 22– ಲೋಕಸಭೆಗೆ ಚುನಾವಣೆ ಘೋಷಣೆ ಆದ ಮೇಲೆ ರಾಜಧಾನಿಯಲ್ಲಿ ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆ ಆರಂಭವಾಗಿದೆ. ಬಿಜೆಪಿ ಬಿಟ್ಟರೆ ಎಲ್ಲ ಪಕ್ಷಗಳೂ ಈಗ ‘ಅನುಕೂಲಸಿಂಧು ಮೈತ್ರಿ’ಗೆ ರಾಜಕೀಯ ಕಸರತ್ತು ನಡೆಸಿವೆ.

ಈ ಚುನಾವಣೆ ಹೊಂದಾಣಿಕೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಎಲ್ಲ ಪಕ್ಷಗಳ ನಾಯಕರು ವ್ಯಾಖ್ಯಾನಿಸುತ್ತಿದ್ದಾರೆ. ಕಳೆದ ವಾರ ಹೆಚ್ಚು ಕಡಿಮೆ ಮಾಜಿ ಪ್ರಧಾನಿ ಚಂದ್ರಶೇಖರ್ ನೇತೃತ್ವದ ಸಮಾಜವಾದಿ ಜನತಾ ಪಕ್ಷ ಮತ್ತು ಜಾರ್ಜ್ ಫರ್ನಾಂಡಿಸ್ ನೇತೃತ್ವದ ಸಮತಾ ಪಕ್ಷದ ನಡುವೆ ಮೈತ್ರಿ ಏರ್ಪಟ್ಟಿದೆ.

ADVERTISEMENT

ಗಾಂಧೀಜಿ ಚಿತಾಭಸ್ಮಕ್ಕಾಗಿ ಪರದಾಟ

ಕಟಕ್, ಮಾರ್ಚ್ 22 (ಯುಎನ್ಐ) – ಇಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಸುರಕ್ಷಿತ ಲಾಕರ್‌ನಲ್ಲಿ ಕಳೆದ 46 ವರ್ಷಗಳಿಂದ ಇರುವ ಮಹಾತ್ಮ ಗಾಂಧಿ ಅವರ ಚಿತಾಭಸ್ಮವನ್ನು ಪಡೆಯಲು ಬಾಪೂಜಿ ಅವರ ಮರಿ ಮೊಮ್ಮಗ ತುಷಾರ್ ಅರುಣ್ ಗಾಂಧಿ ಭಗೀರಥ ಯತ್ನವನ್ನೇ ನಡೆಸಿದ್ದಾರೆ. ಇಂದು ಅವರು ಬ್ಯಾಂಕಿಗೆ ತೆರಳಿ ಚಿತಾಭಸ್ಮವನ್ನು ನೋಡುವ ಯತ್ನ ನಡೆಸಿದರಾದರೂ ಅದು ಸಾಧ್ಯವಾಗಲಿಲ್ಲ.

ತುಷಾರ್ ಗಾಂಧಿ ಅವರು ನಿನ್ನೆ ಒರಿಸ್ಸಾ ಮುಖ್ಯಮಂತ್ರಿ ಜೆ.ಬಿ.ಪಟ್ನಾಯಕ್ ಅವರನ್ನು ಭೇಟಿ ಮಾಡಿ ಚಿತಾಭಸ್ಮವನ್ನು ಒಪ್ಪಿಸಬೇಕೆಂದು ಮನವಿ ಮಾಡಿಕೊಂಡರು. ಚಿತಾಭಸ್ಮವನ್ನು ಸಮುದ್ರದಲ್ಲಿ ವಿಸರ್ಜಿಸಿ ಹಲವಾರು ವರ್ಷಗಳಿಂದ ಈ ಕುರಿತಂತೆ ನಡೆಯುತ್ತಿರುವ ವಿವಾದಗಳಿಗೆ ತೆರೆ ಎಳೆಯುವ ಆಶಯ ವ್ಯಕ್ತಪಡಿಸಿದರು. ಆದರೆ ಪಟ್ನಾಯಕ್ ಈ ಬಗ್ಗೆ ಯಾವುದೇ ಸ್ಪಷ್ಟ ಭರವಸೆಯನ್ನು ನೀಡಲಿಲ್ಲ. ಈ ಬಗ್ಗೆ ತಾವು ತೆಗೆದುಕೊಳ್ಳುವ ನಿರ್ಧಾರವನ್ನು ನಂತರ ತಿಳಿಸುವುದಾಗಿ ಗಾಂಧಿ ಅವರಿಗೆ ಹೇಳಿದರು.

ಚಿತಾಭಸ್ಮವನ್ನು ಮರದ ಪೆಟ್ಟಿಗೆಯಲ್ಲಿ ಇಲ್ಲಿನ ಎಸ್‌ಬಿಐ ಶಾಖೆಯಲ್ಲಿರಿಸಲಾಗಿದೆ. ಅಲ್ಲಿಗೆ ಇಂದು ಬೆಳಿಗ್ಗೆ ತೆರಳಿದ ಗಾಂಧಿ ಅವರಿಗೆ ಚಿತಾಭಸ್ಮವನ್ನು ತೋರಿಸಲು ಬ್ಯಾಂಕ್ ಅಧಿಕಾರಿಗಳು ನಿರಾಕರಿಸಿದರು. ಭಸ್ಮವನ್ನು ಇರಿಸಲಾದ ಕೋಣೆಗೆ ಪ್ರವೇಶಿಸಲು ಅವರಿಗೆ ಅವಕಾಶ ನೀಡಲಿಲ್ಲ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ತೋರಿಸಲು ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.