ಬಂಧನಕ್ಕೆ ‘ಸಹಕರಿಸದ’ ಬಿಹಾರ ಸರ್ಕಾರದ ವಜಾಕ್ಕೆ ಒತ್ತಾಯ
ನವದೆಹಲಿ, ಜುಲೈ 31 (ಪಿಟಿಐ, ಯುಎನ್ಐ)– ಮೇವು ಹಗರಣದ ಆರೋಪಿ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರನ್ನು ಬಂಧಿಸಲು ಬಿಹಾರ ರಾಜ್ಯ ಸರ್ಕಾರ ಸಹಕರಿಸದಿರುವ ಬಗ್ಗೆ ಲೋಕಸಭೆಯಲ್ಲಿ ವಿವಿಧ ಪಕ್ಷಗಳ ಮುಖಂಡರು ಇಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದಾಗ ಕೋಲಾಹಲಕಾರಿ ವಾತಾವರಣ ನಿರ್ಮಾಣವಾಗಿ, ಸಮತಾ ಪಕ್ಷವು ಬಿಹಾರ್ ಆರ್ಜೆಡಿ ಸರ್ಕಾರ ವಜಾ ಮಾಡಬೇಕೆಂದು ಆಗ್ರಹಪಡಿಸಿತು.
‘ಲಾಲೂ ಅವರ ಪತ್ನಿ ರಾಬ್ಡಿ ದೇವಿ ಅವರ ಸರ್ಕಾರವು ಸಂವಿಧಾನ ಬಿಕ್ಕಟ್ಟನ್ನು ಸೃಷ್ಟಿಸಿದೆ. ಇದಕ್ಕೆ ಗುಜ್ರಾಲ್ ಸರ್ಕಾರವೇ ಹೊಣೆ’ ಎಂದು ವಿರೋಧಪಕ್ಷಗಳು ಆರೋಪಿಸಿದವು.
ಮಾಜಿ ಮುಖ್ಯಮಂತ್ರಿಗಳನ್ನು ಬಂಧಿ ಸಲು ರಾಜ್ಯ ಸರ್ಕಾರ ಸಹಕರಿಸದಿದ್ದಲ್ಲಿ ಸೇನೆಯ ನೆರವು ಪಡೆಯುವಂತೆ ವಿಶೇಷ ನ್ಯಾಯಾಲಯವು ಸಿಬಿಐಗೆ ಸೂಚಿಸಿತ್ತು ಎಂದು ವರದಿಯಾಗಿರುವ ಬಗ್ಗೆ ಸಮತಾ ಪಕ್ಷದ ನಿತೀಶ್ಕುಮಾರ್ ಹಾಗೂ ಬಿಜೆಪಿ ಜಸ್ವಂತ್ ಸಿಂಗ್ ಆಶ್ಚರ್ಯ ವ್ಯಕ್ತಪಡಿಸಿದರು.
ವೀರಪ್ಪನ್ಗೆ ಕ್ಷಮಾದಾನ ಇಲ್ಲ: ಕರುಣಾನಿಧಿ ಸ್ಪಷ್ಟನೆ
ಚೆನ್ನೈ, ಜುಲೈ 31 (ಪಿಟಿಐ)– ಕಾಡುಗಳ್ಳ ವೀರಪ್ಪನ್ಗೆ ‘ಕ್ಷಮಾದಾನ’ ನೀಡುವುದನ್ನು ಸಂಪೂರ್ಣ ನಿರಾಕರಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ, ವೀರಪ್ಪನ್ ವಿರುದ್ಧ ಇರುವ ಎಲ್ಲಾ ಮೊಕದ್ದಮೆಗಳಿಗೆ ಶಿಕ್ಷೆ ಜಾರಿಯಾದ ಮೇಲೆ ಆ ಶಿಕ್ಷೆಯ ಪ್ರಮಾಣವನ್ನು ಕಡಿಮೆಗೊಳಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
‘ಕಾನೂನಿನ ಅನ್ವಯ ವೀರಪ್ಪನ್ಗೆ ಕ್ಷಮಾದಾನ ಅಸಾಧ್ಯ; ಆದರೆ, ಶಿಕ್ಷೆಯ ಪ್ರಮಾಣ ಇಳಿಸಲು ಅವಕಾಶಗಳಿವೆ. ಇದನ್ನು ವಿಚಾರಣೆ ನಂತರ ಪರಿಶೀಲಿಸಲಾಗುವುದು’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.