ರಾಜ್ಯದಲ್ಲಿ ದಳ ಅಧಿಕಾರಕ್ಕೆ: ಹೆಗಡೆ
ಬೆಂಗಳೂರು, ಡಿ.15–ಉತ್ತರ ಭಾರತದ ಇತ್ತೀಚಿನ ವಿಧಾನಸಭಾ ಚುನಾವಣೆಗಳ ಫಲಿತಾಂಶ ಕರ್ನಾಟಕದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರದು; ಮುಂದಿನ ವಿಧಾನಸಭಾ ಚುನಾವಣೆಗಳಲ್ಲಿ ನಾವು ಬಹುಮತ ಗಳಿಸಿ, ಅಧಿಕಾರಕ್ಕೆ ಬರುವುದು ಖಚಿತ ಎಂದು ಜನತಾದಳದ ಹಿರಿಯ ಮುಖಂಡ ರಾಮಕೃಷ್ಣ ಹೆಗಡೆ ಅವರು ಇಂದು ಇಲ್ಲಿ ದೃಢ ವಿಶ್ವಾಸ ವ್ಯಕ್ತಪಡಿಸಿದರು.
ಬಂಗಾರಪ್ಪ ವಜಾಕ್ಕೆ ಮೊಯಿಲಿ ಆಗ್ರಹ
ನವದೆಹಲಿ,ಡಿ.15– ಪಕ್ಷದ ನಾಯಕತ್ವದ ವಿರುದ್ಧ ಬಂಡಾಯವೆದ್ದಿರುವ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಕೂಡಲೇ ವಜಾಮಾಡಬೇಕೆಂದು ಕರ್ನಾಟಕದ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರು ಪ್ರಧಾನಮಂತ್ರಿ ಪಿ.ವಿ.ನರಸಿಂಹರಾವ್ ಅವರನ್ನು ಒತ್ತಾಯಿಸಿದ್ದಾರೆ.
ಐತಿಹಾಸಿಕ ಗ್ಯಾಟ್ ಒಪ್ಪಂದಕ್ಕೆ ಸಹಿ
ಬ್ರಸೆಲ್ಸ್, ಡಿ,15 (ರಾಯಿಟರ್, ಪಿಟಿಐ)– ಗ್ಯಾಟ್ ವಿಶ್ವ ವ್ಯಾಪಾರ ವಹಿವಾಟಿಗೆ ಐರೋಪ್ಯ ಸಮುದಾಯದ ವಿದೇಶಾಂಗ ಸಚಿವರುಗಳು ಇಂದು ಒಪ್ಪಿಗೆ ನೀಡಿವೆ ಎಂದು ರಾಜಕೀಯ ಪರಿಣತರು ತಿಳಿಸಿದ್ದಾರೆ.
ಇಡೀ ವಹಿವಾಟಿಗೆ ಒಪ್ಪಿಗೆ ನೀಡಲಾಗಿದೆ. ರಕ್ಷಣಾ ಸಾಮಗ್ರಿಗಳ ವ್ಯಾಪಾರಕ್ಕೆ ಸಂಬಂಧಪಟ್ಟಂತೆ ಐರೋಪ್ಯ ಸಮುದಾಯದ ಒಪ್ಪಿಗೆ ಪಡೆಯಲು ಮತದಾನದ ಕ್ರಮವನ್ನೂ ಸರಳಗೊಳಿಸಲಾಗಿದೆ ಎಂದು ರಾಜತಂತ್ರಜ್ಞರೊಬ್ಬರು ತಿಳಿಸಿದರು.
ಎಲ್ಲ ಗುರುತುದಾರರಿಗೆ ಗುರುತು ಚೀಟಿ
ನವದೆಹಲಿ, ಡಿ.15 (ಯುಎನ್ಐ): ಜಮ್ಮು– ಕಾಶ್ಮೀರದ ಹೊರತಾಗಿ ದೇಶದ ಎಲ್ಲಾ ಲೋಕಸಭಾ ಕ್ಷೇತ್ರಗಳ ಮತದಾರರಿಗೆ ಫೋಟೊ ಸಹಿತವಾದ ಗುರುತಿನ ಕಾರ್ಡುಗಳನ್ನು ಮುಂದಿನ ವರ್ಷದ ನವೆಂಬರ್ 30ರೊಳಗೆ ಒದಗಿಸಬೇಕು ಎಂದು ಚುನಾವಣಾ ಆಯೋಗವು ಇಂದು ಆದೇಶ ನೀಡಿತು.
ಈ ಅವಧಿಯೊಳಗೆ ಅರ್ಹ ಮತದಾರರಿಗೆ ಗುರುತಿನ ಚೀಟಿ ನೀಡದೆ ಹೋದರೆ 1995ರ ಜನವರಿ ನಂತರ ಆಯೋಗವು ಯಾವುದೇ ಚುನಾವಣೆಯನ್ನು ನಡೆಸುವುದಿಲ್ಲ ಎಂದು ಆಯೋಗದ ಕಾರ್ಯದರ್ಶಿ ಕೆ.ಪಿ.ಜಿ.ಕುಟ್ಟಿ ಸಹಿಮಾಡಿದ ಆದೇಶದಲ್ಲಿ ಎಚ್ಚರಿಕೆ ನೀಡಲಾಗಿದೆ.
ತಾರೆಯರಿಗೆ ಪ್ರಶಸ್ತಿ
ಮುಂಬೈ, ಡಿ15 (ಯುಎನ್ಐ): ಸಂಜಯ್ ದತ್ ಮತ್ತು ಮಾಧುರಿ ದೀಕ್ಷಿತ್ ಅವರಿಗೆ ‘ಖಳನಾಯಕ್’ ಚಿತ್ರದಲ್ಲಿನ ಅಭಿನಯಕ್ಕಾಗಿ ಶ್ರೇಷ್ಠ ನಟ ಮತ್ತು ಶ್ರೇಷ್ಠ ನಟಿ ಪ್ರಶಸ್ತಿಗಳನ್ನು ನೀಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.