ADVERTISEMENT

25 ವರ್ಷಗಳ ಹಿಂದೆ | ಮಂಗಳವಾರ, 18–4–1995

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2020, 17:41 IST
Last Updated 17 ಏಪ್ರಿಲ್ 2020, 17:41 IST

ಠೇವಣಿ ಗರಿಷ್ಠ ಬಡ್ಡಿ ದರ ಶೇ 1 ಏರಿಕೆ

ಮುಂಬೈ, ಏ. 17 (ಯುಎನ್‌ಐ, ಪಿಟಿಐ)– ಸಾವಧಿ ಠೇವಣಿ ಮೊತ್ತಕ್ಕೆ ನೀಡಬಹುದಾದ ಗರಿಷ್ಠ ಬಡ್ಡಿ ಪ್ರಮಾಣವನ್ನು ಇಂದು ಶೇಕಡ 1ರಷ್ಟು ಏರಿಸಿದ ರಿಸರ್ವ್‌ ಬ್ಯಾಂಕ್‌, ರಫ್ತು ಸಾಲ ಕುರಿತಂತೆ ಇನ್ನಷ್ಟು ರಿಯಾಯಿತಿ ಪ್ರಕಟಿಸಿತು.

ಜನಪದ ಕಲಾವಿದರಿಗೆ ಪ್ರಶಸ್ತಿಗಿಂತ ಮಾಸಾಶನ ಪ್ರಶಸ್ತ: ಸಲಹೆ

ADVERTISEMENT

ಬೆಂಗಳೂರು, ಏ. 17– ‘ಒಂದು ದಿನದ ಪ್ರಶಸ್ತಿಗಳನ್ನು ನೀಡಿ ಸರ್ಕಾರ ಜನಪದ ಕಲಾವಿದರನ್ನು ಉದ್ಧಾರ ಮಾಡಬೇಕಾದ ಅಗತ್ಯವಿಲ್ಲ. ಪ್ರಶಸ್ತಿ ನೀಡುವ ಸಂಪ್ರದಾಯದ ಬದಲಿಗೆ ಕಲಾವಿದರಿಗೆ ಮಾಸಾಶನ ಕೊಡುವ ವ್ಯವಸ್ಥೆಯಾದರೆ ಜನಪದ ಕಲೆಗೆ ಜೀವ ಸಂಚಾರವಾದೀತು’ ಎಂದು ಜನಪದ ವಿದ್ವಾಂಸ ಮುದೇನೂರು ಸಂಗಣ್ಣ ಇಂದು ಇಲ್ಲಿ ಕಟುವಾಗಿ ಟೀಕಿಸಿದರು.

ಕನಿಷ್ಠ ಪ್ರಶಸ್ತಿ ದೊರೆತವರಿಗಾದರೂ ಮಾಸಾಶನ ದೊರೆಯುವಂತಾಗಬೇಕು ಎಂದ ಅವರು, ಮಾನವಶಾಸ್ತ್ರದ ಮೂಲದ್ರವ್ಯವಾದ ಜಾನಪದ ವಿಪುಲವಾಗಿ ಬೆಳೆಯಲು ಅಗತ್ಯವಾಗುವಂತೆ ಸರ್ಕಾರ ಮತ್ತು ಅಕಾಡೆಮಿಗಳು ಇಂದು ಸ್ಪಂದಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಏರ್ಪಡಿಸಿದ್ದ 1994ರ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಜಾನಪದವೆನ್ನುವುದು ಒಂದು ಜನಾಂಗದ ಅನುಭವದ ಅನಿಸಿಕೆ, ಆತ್ಮಸಾಕ್ಷಿಯ ಪ್ರತೀಕ. ಅದು ನೀಡುವ ಲೋಕದೃಷ್ಟಿ ಅನನ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.