ಬಾಬ್ರಿ ಮಸೀದಿ ಧ್ವಂಸ: ಆರೋಪಪಟ್ಟಿಗೆ ನಿರ್ಧಾರ– ಠಾಕ್ರೆ, ಅಡ್ವಾಣಿ ಸೇರಿ 49 ಜನ ಆರೋಪಿಗಳು
ಲಖನೌ, ಸೆ. 9– (ಪಿಟಿಐ): ಉತ್ತರಪ್ರದೇಶದಅಯೋಧ್ಯೆಯಲ್ಲಿ 1992ರ ಡಿಸೆಂಬರ್ ಆರರಂದು ನಡೆದ ‘ಬಾಬ್ರಿ ಮಸೀದಿ’ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನಾ ಮುಖ್ಯಸ್ಥ ಬಾಳಾ ಠಾಕ್ರೆ, ಬಿಜೆಪಿ ಅಧ್ಯಕ್ಷ
ಎಲ್.ಕೆ. ಅಡ್ವಾಣಿ ಹಾಗೂ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಸೇರಿದಂತೆ 49 ಜನರ ವಿರುದ್ಧ ಆರೋಪಪಟ್ಟಿ ಸಿದ್ಧಪಡಿಸಲು ನಿಯೋಜಿತ ನ್ಯಾಯಾಲಯ ನಿರ್ಧರಿಸಿದೆ.
ಆರೋಪಪಟ್ಟಿ ಸಿದ್ಧಪಡಿಸಲಾಗುವ ಇತರೆ ಆರೋಪಿಗಳ ಪೈಕಿ ಬಿಜೆಪಿ ನಾಯಕ ಡಾ. ಮುರಳಿ ಮನೋಹರ ಜೋಷಿ, ವಿಜಯ ರಾಜೇ ಸಿಂಧಿಯಾ, ವಿಶ್ವ ಹಿಂದೂ ಪರಿಷತ್ ನಾಯಕರಾದ ಗಿರಿರಾಜ್ ಕಿಶೋರ್ ಮತ್ತು ಅಶೋಕ್ ಸಿಂಘಾಲ್ ಹಾಗೂ ಬಜರಂಗ ದಳದ ನಾಯಕ ವಿನಯ್ ಕಟಿಯಾರ್ ಸೇರಿದ್ದಾರೆ.
ರಾಜ್ಯಸಭೆಗೆ ಮೂಪನಾರ್ ಸೇರಿ ಟಿಎಂಸಿ ಸದಸ್ಯರ ರಾಜೀನಾಮೆ
ನವದೆಹಲಿ, ಸೆ. 9 (ಪಿಟಿಐ): ಕೇಂದ್ರ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವೆ ಜಯಂತಿ ನಟರಾಜನ್, ತಮಿಳು ಮಾನಿಲ ಪಕ್ಷದ ಅಧ್ಯಕ್ಷ ಜಿ.ಕೆ. ಮೂಪನಾರ್ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಪೀಟರ್
ಆಲ್ಫೊನ್ಸೆ ಅವರು ತಮ್ಮ ರಾಜ್ಯಸಭಾ ಸ್ಥಾನಗಳಿಗೆ ‘ತಾಂತ್ರಿಕ ಕಾರಣ’ದ ಹಿನ್ನೆಲೆಯಲ್ಲಿ
ನೀಡಿದ್ದ ರಾಜೀನಾಮೆಯನ್ನು ರಾಜ್ಯಸಭೆಯ ಸಭಾಪತಿ ಕೃಷ್ಣಕಾಂತ್ ಇಂದು ಅಂಗೀಕರಿಸಿದರು.
ಕಾಂಗ್ರೆಸ್ ಟಿಕೆಟ್ ಮೇಲೆ ಸ್ಪರ್ಧಿಸಿ ಗೆದ್ದಿದ್ದ
ಈ ಮೂವರು ಸದಸ್ಯರ ಆಯ್ಕೆಯನ್ನು ಪ್ರಶ್ನಿಸಿ
ಶಿವಸೇನೆಯ ಸದಸ್ಯರೊಬ್ಬರು ಅರ್ಜಿ ಸಲ್ಲಿಸಿ, ಇದು ‘ಪಕ್ಷಾಂತರ’ ಎಂದು ವಾದಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.