ನಾಗಪುರ: 120ಕ್ಕೂ ಹೆಚ್ಚು ಆದಿವಾಸಿಗಳು ಕಾಲ್ತುಳಿತಕ್ಕೆ ಬಲಿ
ನಾಗಪುರ, ನ. 23 (ಪಿಟಿಐ, ಯುಎನ್ಐ)– ಇಲ್ಲಿನ ವಿಧಾನಮಂಡಲ ಭವನಕ್ಕೆ ಮುತ್ತಿಗೆ ಹಾಕಲು ಇಂದು ಸಂಜೆ ಮೆರವಣಿಗೆಯಲ್ಲಿ ಬಂದ ಆದಿವಾಸಿ ಸಮುದಾಯದವರ ಮೇಲೆ ಪೊಲೀಸರು ಲಾಠಿಪ್ರಹಾರ ನಡೆಸಿದಾಗ ಉಂಟಾದ ಗೊಂದಲದಲ್ಲಿ ಕಾಲ್ತಳಿತದಿಂದ 120ಕ್ಕೂ ಹೆಚ್ಚು ಮಂದಿ ಸತ್ತು ಇತರ ಸುಮಾರು 500 ಮಂದಿ ಗಾಯಗೊಂಡಿದ್ದಾರೆ.
ಸತ್ತವರಲ್ಲಿ 75 ಮಹಿಳೆಯರು ಹಾಗೂ 29 ಮಕ್ಕಳು ಸೇರಿದ್ದಾರೆ ಎಂದು ಇಲ್ಲಿನ ವೈದ್ಯಕೀಯ ಕಾಲೇಜು ಆಸ್ಪತ್ರೆ ಮೂಲಗಳು ದೃಢಪಡಿಸಿವೆ.
ಮೀಸಲಾತಿ ಮತ್ತು ಇತರ ಸೌಲಭ್ಯಗಳಿಗೆ ಸಂಬಂಧಪಟ್ಟಂತೆ ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿನ ಲೋಪದೋಷಗಳನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿ ಗೋವರಿ ಆದಿವಾಸಿ ಸಮಾಜ ಮೆರವಣಿಗೆಯನ್ನು ಸಂಘಟಿಸಿತ್ತು.
ಹಳೆ ಮಾರಿಸ್ ಕಾಲೇಜಿನ ಸಮೀಪ ಪೊಲೀಸ್ ಬಂದೋಬಸ್ತ್ ಲೆಕ್ಕಿಸದೆ ಮೆರವಣಿಗೆಕಾರರು ಮುನ್ನುಗ್ಗಲು ಯತ್ನಿಸಿದಾಗ ಲಾಠಿಪ್ರಹಾರ ಅಗತ್ಯವಾಯಿತು. ಕಂಗೆಟ್ಟ ಜನರು ಅಡ್ಡಾದಿಡ್ಡಿ ಓಡ ತೊಡಗಿ ಕಾಲ್ತುಳಿತಕ್ಕೆ ಸಿಕ್ಕಿದರು.
ಕಾಂಗೈನಿಂದ ಬೆದರಿಕೆ ತಂತ್ರ
ಸಿಪಿಐ ಟೀಕೆ
ಬೆಂಗಳೂರು, ನ. 23– ಕೇಂದ್ರದಲ್ಲಿರುವಂತೆ ರಾಜ್ಯಗಳಲ್ಲಿಯೂ ಕಾಂಗ್ರೆಸ್ ಸರ್ಕಾರವನ್ನೇ ಆಧಿಕಾರಕ್ಕೆ ತನ್ನಿ. ಇಲ್ಲವೇ ರಾಜ್ಯಗಳಿಗೆ ಸಿಗುವ ನಿಧಿ ಕುಗ್ಗಬಹುದು ಎಂದು ಪ್ರಧಾನಿ ಪಿ.ವಿ. ನರಸಿಂಹರಾವ್ ಮತ್ತಿತರ ಕಾಂಗ್ರೆಸ್ ನಾಯಕರು ಜನರನ್ನು ‘ಬ್ಲಾಕ್ಮೇಲ್’ ಮಾಡುತ್ತಿದ್ದಾರೆ ಎಂದು ಸಿಪಿಐ ಆರೋಪಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.