ADVERTISEMENT

ನೀರಾವರಿಗೆ 8 ಸಾವಿರ ಕೋಟಿ ಸಂಗ್ರಹಕ್ಕೆ ಸರ್ಕಾರದ ಕ್ರಮ

1994

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2019, 17:56 IST
Last Updated 25 ಸೆಪ್ಟೆಂಬರ್ 2019, 17:56 IST

ನೀರಾವರಿಗೆ 8 ಸಾವಿರ ಕೋಟಿ ಸಂಗ್ರಹಕ್ಕೆ ಸರ್ಕಾರದ ಕ್ರಮ

ತಿಪಟೂರು, ಸೆ. 25– ನೀರಾವರಿ ಯೋಜನೆಗಳನ್ನು ಪೂರ್ತಿಗೊಳಿಸಿ ಕೃಷ್ಣಾ ಹಾಗೂ ಕಾವೇರಿ ನದಿಗಳ ನೀರಿನ ರಾಜ್ಯದ ಪಾಲನ್ನು ಸಂಪೂರ್ಣವಾಗಿ ಬಳಸಿಕೊಳ್ಳುವುದಕ್ಕೆ ಅಗತ್ಯವಿರುವ 8 ಸಾವಿರ ಕೋಟಿ ರೂ.ಗಳನ್ನು ಸಂಗ್ರಹಿಸಲು ತಮ್ಮ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಅವರು ಇಂದು ಇಲ್ಲಿ ಹೇಳಿದರು.

ನೂತನವಾಗಿ ನಿರ್ಮಿಸಿದ ಬಾಗೂರು– ನವಿಲೆ ಸುರಂಗ ಮಾರ್ಗದ ಮೂಲಕ ತುಮಕೂರು ಹಾಗೂ ಮಂಡ್ಯ ಜಿಲ್ಲೆಗಳಿಗೆ ನೀರು ಬಿಡುಗಡೆ ಮಾಡುವ ಸಮಾರಂಭದಲ್ಲಿ ಅವರು ಮಾತನಾಡಿದರು.

ADVERTISEMENT

ಟಿ.ವಿ ಡಬ್ಬಿಂಗ್ ಚಿತ್ರ ವಿರೋಧಿಸಲು ರಾಜ್ ಕರೆ

ತುಮಕೂರು, ಸೆ. 25– ದೂರದರ್ಶನದಲ್ಲಿ ಡಬ್ಬಿಂಗ್ ಚಿತ್ರಗಳು ಬರುತ್ತಿರುವುದನ್ನು ತಡೆಯಲು ಹೋರಾಟ ಆರಂಭಿಸಬೇಕೆಂದು ಕನ್ನಡ ಚಿತ್ರನಟ ಡಾ. ರಾಜ್‌ಕುಮಾರ್ ಇಂದು ಕನ್ನಡಿಗರಿಗೆ ಕರೆ ನೀಡಿದರು.

ದೂರದರ್ಶನದಲ್ಲಿ ಈ ಹಿಂದೆ ಬಂದ ಹಿಂದಿ ‘ರಾಮಾಯಣ’ ಈಗ ಕನ್ನಡಕ್ಕೆ ಡಬ್‌ ಆಗಿ ನಾಳೆಯಿಂದ ಪ್ರಸಾರವಾಗಲಿದೆ. ಅದು ಬರಕೂಡದು, ಬರದಂತೆ ನೋಡಿಕೊಳ್ಳಬೇಕು. ಅದರ ವಿರುದ್ಧ ಹೋರಾಟ ನಡೆಸಬೇಕೆಂದು ಡಾ. ರಾಜ್ ಸಾರ್ವಜನಿಕ ಸಭೆಯಲ್ಲಿ ಕರೆ ನೀಡಿದರು.

ತುಮಕೂರಿನಲ್ಲಿ ಇಂದು ರಾತ್ರಿ 90 ಲಕ್ಷ ರೂ. ವೆಚ್ಚದ ಗುಬ್ಬಿ ವೀರಣ್ಣ ಕಲಾ ಕ್ಷೇತ್ರವನ್ನು ಉದ್ಘಾಟಿಸಿ ನಂತರ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಡಾ. ರಾಜ್‌, ಹಿಂದೆ ಟಿ.ವಿ.ಯಲ್ಲಿ ‘ಟಿಪ್ಪೂ ಸುಲ್ತಾನ್’ ಕನ್ನಡ ಡಬ್ ಚಿತ್ರವನ್ನು ಪ್ರಸಾರ ಮಾಡಲು ನಿರ್ಧರಿಸಿದ್ದರು. ಆಗ ನಾನು ಚಳವಳಿ ಮಾಡುವುದಾಗಿ ಹೇಳಿ ಅದನ್ನು ತಪ್ಪಿಸಿದ್ದೆ ಎಂದು ಅಂದಿನ ಘಟನೆಯನ್ನು ಪ್ರಸ್ತಾಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.