ರಾಷ್ಟ್ರಪತಿ ಚುನಾವಣೆ: ಎಲ್ಲ ಪಕ್ಷಗಳಲ್ಲಿಯೂ ಮತಾಂತರ
ನವದೆಹಲಿ, ಆ. 16– ರಾಷ್ಟ್ರದ ಅತ್ಯುನ್ನತ ಸ್ಥಾನವಾದ ರಾಷ್ಟ್ರಪತಿ ಸ್ಥಾನಕ್ಕೆ ಇಂದು ನಡೆದ ಐತಿಹಾಸಿಕ ಚುನಾವಣೆಯಲ್ಲಿ ಅತ್ಯಂತ ನಿಕಟವಾದ ಸ್ಪರ್ಧೆ ಸಂಭವಿಸಿ, ಪ್ರಮುಖ ಸ್ಪರ್ಧಿಗಳಾದ ಶ್ರೀ ವಿ.ವಿ. ಗಿರಿ ಮತ್ತು ಶ್ರೀ ಸಂಜೀವ ರೆಡ್ಡಿಯವರ ಶಿಬಿರಗಳಲ್ಲಿ ಎಚ್ಚರಿಕೆಯ ಆಶಾವಾದ ಪ್ರಕಟವಾಯಿತು.
ಬಹುತೇಕ ಎಲ್ಲ ಪಕ್ಷಗಳ ಲ್ಲಿಯೂ ಮತಾಂತರ ನಡೆದ ಚಿಹ್ನೆಗಳು ತೋರಿಬಂದವು. ಎರಡು ಕಮ್ಯುನಿಸ್ಟ್ ಪಕ್ಷಗಳು ಮತ್ತು ಎಸ್ಸೆಸ್ಪಿಯನ್ನುಳಿದು ಇತರ ಎಲ್ಲ ಪಕ್ಷಗಳಲ್ಲಿ ಈ ಮತಾಂತರ ನಡೆದಿದೆ.
ಮತದಾನಕ್ಕೆ 24 ಗಂಟೆಗಳು ಉಳಿದಿರುವಂತೆ ಸಂಜೀವ ರೆಡ್ಡಿಯವರ ಬೆಂಬಲಿಗರಲ್ಲಿ ಹೊಸ ಉತ್ಸಾಹ ತೋರಿಬಂತು.
ಊಹಾಪೋಹ: ರಾಜ್ಯದ ಕಾಂಗ್ರೆಸ್ ಶಾಸಕರ ಬಲಕ್ಕಿಂತ ಹೆಚ್ಚು ಮತ ಸಂಜೀವ ರೆಡ್ಡಿಯವರಿಗೆ
ಬೆಂಗಳೂರು, ಆ. 16– ಕಾಂಗ್ರೆಸ್ ಸ್ಪರ್ಧಿ ಶ್ರೀ ಸಂಜೀವ ರೆಡ್ಡಿ ಅವರು ಕಾಂಗ್ರೆಸ್ ಸದಸ್ಯ ಬಲಕ್ಕಿಂತ ಹೆಚ್ಚು ಪ್ರಥಮ ಮತಗಳನ್ನು ಗಳಿಸಿದ್ದಾರೆಂಬ ಕಾಂಗ್ರೆಸ್ ಪಕ್ಷದ ವಿಶ್ವಾಸ ಹಾಗೂ 30ರಿಂದ 50ರವರೆಗೆ ಕಾಂಗ್ರೆಸ್ ಸದಸ್ಯರಲ್ಲಿ ಮತಾಂತರವಾಗಿದೆಯೆಂಬ ಕಾಂಗ್ರೆಸ್ಸೇತರರ ನಂಬಿಕೆಯೊಡನೆ ಇಂದು ನಗರದಲ್ಲಿ ರಾಷ್ಟ್ರಪತಿ ಚುನಾವಣೆ ಮತದಾನ ಮುಕ್ತಾಯವಾಯಿತು.
ಬೆಳಿಗ್ಗೆ 10 ಗಂಟೆಗೆ ಮತದಾನ ಆರಂಭವಾಗುವ ಮುನ್ನ ನಡೆದ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಪಕ್ಷದ ನಾಯಕರಾದ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್, ಪಕ್ಷದ ವ್ಹಿಪ್ಗೆ ವಿರೋಧವಾಗಿ ಮತ ನೀಡುವುದು ಅಶಿಸ್ತಿನ ವರ್ತನೆಯಾಗುವುದೆಂದು ಸದಸ್ಯರಿಗೆ ಎಚ್ಚರಿಕೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.