ಮಾರ್ಚ್ ಆರರೊಳಗೆ ಧರ್ಮವೀರ ವಾಪಸಿಗೆ ಚವಾಣ್ ನಕಾರ
ನವದೆಹಲಿ, ಮಾ. 3– ಮಾರ್ಚ್ ಆರರೊಳಗೆ ಪಶ್ಚಿಮ ಬಂಗಾಳ ರಾಜ್ಯಪಾಲ ಧರ್ಮವೀರ ಅವರನ್ನು ವಾಪಸು ಮಾಡಿಕೊಳ್ಳಬೇಕೆಂಬ ಸಂಯುಕ್ತರಂಗ ಸರ್ಕಾರದ ಒತ್ತಾಯಕ್ಕೆ ಮಣಿಯದ ಕೇಂದ್ರ ಸರ್ಕಾರದ ನಿರ್ಧಾರದಿಂದ, ಮಾರ್ಚ್ ಆರರಂದು ಪಶ್ಚಿಮ ಬಂಗಾಳ ಶಾಸನಸಭೆ ಸೇರಿದಾಗ ರಾಜ್ಯಪಾಲ ಹಾಗೂ ಸದಸ್ಯರ ನಡುವೆ ಘರ್ಷಣೆ ಅನಿವಾರ್ಯವೆಂಬಂತೆ ಕಾಣುತ್ತಿದೆ.
ಮಾರ್ಕ್ಸಿಸ್ಟ್ರ ಕಮ್ಯುನಿಸ್ಟ್ ಜ್ಯೋತಿರ್ಮಯ ಬಸು ಹಾಗೂ ಇತರರು ಮಂಡಿಸಿದ ಗಮನ ಸೆಳೆಯುವ ಸೂಚನೆಯ ರೂಪದಲ್ಲಿ ಈ ಪ್ರಶ್ನೆ ಇಂದು ಲೋಕಸಭೆಯಲ್ಲಿ ತಲೆ ಎತ್ತಿತು.
ಮಾರ್ಚ್ ಆರರೊಳಗೆ ಧರ್ಮವೀರರನ್ನು ವಾಪಸು ಮಾಡಿಕೊಳ್ಳಲಾಗುವುದೇ ಎಂಬ ನಿರ್ದಿಷ್ಟ ಪ್ರಶ್ನೆಗೆ ‘ಇಲ್ಲ’ ಎಂದು
ಗೃಹ ಸಚಿವ ಚವಾಣ್ ಸ್ಪಷ್ಟ ಉತ್ತರ ಕೊಟ್ಟರು.
ಚಂದ್ರಯಾನದ ಮತ್ತೊಂದು ಹಂತ ಭೂಕಕ್ಷೆಗೆ ಅಪೊಲೊ–9
ಹೂಸ್ಟನ್ ಟೆಕ್ಸಾಸ್, ಮಾ. 3– ಮೂವರು ಗಗನಯಾತ್ರಿಗಳಿರುವ ಅಪೊಲೊ–9 ಬಾಹ್ಯಾಕಾಶ ನೌಕೆಯನ್ನು ಇಂದು ಗಗನಕ್ಕೆ ಹಾರಿಸಿ, ಮಾನವನ ಹತ್ತು ದಿನಗಳ ಅತ್ಯಂತ ಜಟಿಲ ಹಾಗೂ ಸಾಹಸಮಯ ಬಾಹ್ಯಾಕಾಶ ಪ್ರಯಾಣ ಪ್ರಾರಂಭವಾಯಿತು. ಈ ವರ್ಷದ ಕೊನೆಯ ವೇಳೆಗೆ ಚಂದ್ರನಲ್ಲಿ ಮಾನವನನ್ನು ಇಳಿಸುವಂಥ ಅತಿ ನಾಜೂಕಾದ ಹಾಗೂ ವಿಚಿತ್ರವಾಗಿ ಕಾಣಿಸುವ ಯಂತ್ರವೊಂದನ್ನು ಪರೀಕ್ಷಿಸುವುದೇ ಈ ಹತ್ತು ದಿನಗಳ ಯಾನದ ಉದ್ದೇಶ.
ಉಗ್ರ ಚಳವಳಿಗೆ ಮಹಾರಾಷ್ಟ್ರ ಸಿದ್ಧತೆ
ಪೊಯ್ನಾಡ್ (ಮಹಾರಾಷ್ಟ್ರ), ಮಾ. 3– ಮೈಸೂರು–ಮಹಾರಾಷ್ಟ್ರ ಗಡಿಯಲ್ಲಿರುವ ಮರಾಠಿ ಮಾತನಾಡುವ ಪ್ರದೇಶಗಳನ್ನು ಮಹಾರಾಷ್ಟ್ರದೊಳಗೆ ವಿಲೀನಗೊಳಿಸುವಂತೆ ಒತ್ತಾಯಪಡಿಸಲು ಕೂಡಲೆ ಸಕಲ ಸ್ವರೂಪಗಳ ಚಳವಳಿ ನಡೆಸಲಾಗುವುದೆಂದು ರೈತರು ಮತ್ತು ಕಾರ್ಮಿಕರ ಪಕ್ಷ ಘೋಷಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.