ಅಹಿತ ವಾತಾವರಣ ಯತ್ನ ಖಂಡನೀಯ
ಬೆಂಗಳೂರು, ಸೆ. 3– ‘ಪ್ರದೇಶ ತಾರತಮ್ಯದ ಮಾತೆತ್ತಿ ರಾಜ್ಯದಲ್ಲಿ ಒಂದು ಅಹಿತ ವಾತಾವರಣವನ್ನು ನಿರ್ಮಿಸುವ ಪ್ರಯತ್ನವು ಕೆಲವು ರಾಜಕೀಯ ಉದ್ದೇಶಗಳುಳ್ಳ’ ವ್ಯಕ್ತಿಗಳಿಂದ ನಡೆಯುತ್ತಿರುವುದನ್ನು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ತೀವ್ರವಾಗಿ ಖಂಡಿಸಿದ್ದಾರೆ.
ನೀರೇ ಇಲ್ಲದಿರುವ ಕಡೆಯಲ್ಲಿ ಕೆಸರಿದೆ ಎಂದು ವಾದಿಸುವ ಇಂಥವರು ಅವಕಾಶ ಸಿಕ್ಕಿದಾಗಲೆಲ್ಲಾ ಪ್ರತಿಯೊಂದು ಬಾರಿಯೂ, ಹಳೆ ಮೈಸೂರು– ಹೊಸ ಮೈಸೂರಿನ ಪ್ರಸ್ತಾಪ ಎತ್ತುತ್ತಲೇ ಬಂದಿದ್ದಾರೆ. ಇದು ಅತ್ಯಂತ ವಿಷಾದಕರ ಸಂಗತಿ ಎಂದು ಅವರು ಹೇಳಿದರು.
ವಿದ್ಯುಚ್ಛಕ್ತಿ ಮಂಡಳಿಯ ಆಯವ್ಯಯ ಪಟ್ಟಿಯ ಮೇಲೆ ನಿನ್ನೆ ಮತ್ತು ಇಂದು ನಡೆದ ಚರ್ಚೆಯಲ್ಲಿ ವ್ಯಕ್ತವಾದ ಟೀಕೆಗಳನ್ನು ಪ್ರಸ್ತಾಪಿಸಿ, ವಲಯ ತಾರತಮ್ಯದ ಧ್ವನಿಯೆತ್ತಿದ ಸದಸ್ಯರನ್ನು ತಮ್ಮ ಉತ್ತರದಲ್ಲಿ ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿ ಗಳು ‘ಆ ಪ್ರದೇಶ ಮುಂದುವರೆದಿದೆ, ಈ ಪ್ರದೇಶ ಹಿಂದುಳಿದಿದೆ ಎಂದು ಹೇಳುವವರು ಅದನ್ನು ರಾಜಕೀಯ ದೃಷ್ಟಿಯಿಂದ ಹೇಳುತ್ತಿದ್ದಾರೆ ಎಂದು ಗೊತ್ತಾಗಿದೆ. ಇದು ತುಂಬಾ ವಿಷಾದಕರ’ ಎಂದರು.
ಇನ್ನು ಮಳೆ ಬಿದ್ದರೂ ಸಾರ್ಥಕವಿಲ್ಲ
ಬೆಂಗಳೂರು, ಸೆ. 3– ಇನ್ನು ಮುಂದೆ ಸಾಕಷ್ಟು ಮಳೆ ಬಿದ್ದರೂ ರಾಜ್ಯದಲ್ಲಿ ಈ ಸಾರಿ ಮುಂಗಾರು ಬೆಳೆ ಉತ್ತಮ ಫಸಲು ನೀಡುವ ಸಾಧ್ಯತೆ ಇಲ್ಲ. ಸಕಾಲದಲ್ಲಿ ಮಳೆ ಹೋದ ಕಾರಣ, ರಾಜ್ಯದ ಅರ್ಧದಷ್ಟು ಜಮೀನುಗಳಲ್ಲಿ ಬಿತ್ತನೆಯೇ ಸಾಧ್ಯವಾಗಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.