ADVERTISEMENT

50 ವರ್ಷಗಳ ಹಿಂದೆ: ಶುಕ್ರವಾರ, 23–1–1970

​ಪ್ರಜಾವಾಣಿ ವಾರ್ತೆ
Published 22 ಜನವರಿ 2020, 20:15 IST
Last Updated 22 ಜನವರಿ 2020, 20:15 IST

ಹೈಕೋರ್ಟುಗಳಲ್ಲಿ ಪ್ರದೇಶ ಭಾಷೆ ಬಳಕೆ ರಾಜ್ಯಗಳ ನಿರ್ಧಾರಕ್ಕೆ
ನವದೆಹಲಿ, ಜ. 22– ಹೈಕೋರ್ಟ್‌ಗಳಲ್ಲಿ ಪ್ರಾದೇಶಿಕ ಭಾಷೆ ಜಾರಿಗೆ ತರುವುದು ಮತ್ತು ಬಿಡುವುದನ್ನು ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಡಲು ಕೇಂದ್ರ ಸಂಪುಟವು ಇಂದು ನಿರ್ಧರಿಸಿತು.

ನ್ಯಾಯಸ್ಥಾನಗಳಲ್ಲಿ ಆಯಾ ಪ್ರದೇಶಗಳ ಭಾಷೆಗಳನ್ನೇ ಜಾರಿಗೆ ತರುವ ಬಗ್ಗೆ ಅಧಿಕೃತ ಭಾಷಾ ವಿಧೇಯಕ ಕುರಿತ ಏಳನೇ ವಿಭಾಗಕ್ಕೆ ಸಂಬಂಧಿಸಿದಂತೆ ಈವರೆಗಿನ ಪ್ರಗತಿಯನ್ನು ಪರಿಶೀಲಿಸಿದ ನಂತರ ಸಂಪುಟದ ಸಭೆಯು ಈ ನಿರ್ಧಾರವನ್ನು ಕೈಗೊಂಡಿತು.

ಈ ವಿಷಯದಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪ‍ದ ವಿರುದ್ಧ ಸಭೆಯಲ್ಲಿ ಒಮ್ಮತದ ಅಭಿಪ್ರಾಯವನ್ನು ವ್ಯಕ್ತಪಡಿಸಲಾಯಿತು.

ADVERTISEMENT

ಪ್ರದೇಶ ಭಾಷೆಗಳಲ್ಲೇ ತೀರ್ಪು ನೀಡುವುದಕ್ಕೆ ಕಾಲ ನಿಗದಿಯಲ್ಲಿ ರಾಜ್ಯ ಸರ್ಕಾರಗಳಿಗೆ ಸರ್ವಸ್ವಾತಂತ್ರ್ಯ ನೀಡಲಾಯಿತು. ತೀರ್ಪಿನ ಇಂಗ್ಲಿಷ್ ಅಥವಾ ಹಿಂದಿ ಪ್ರತಿಯೊಂದನ್ನು ಸಿದ್ಧಪಡಿಸುವ ಅಗತ್ಯವನ್ನು ಸೂಚಿಸಲಾಯಿತು.

ಎ.ಐ.ಸಿ.ಸಿ. ಕಚೇರಿ ಪಡೆಯಲು ಇಂದಿರಾ ಗುಂಪಿನ ಸೌಮ್ಯ ಯತ್ನ
ನವದೆಹಲಿ, ಜ. 22– ಜಂತರ್‌ಮಂತರ್ ರಸ್ತೆಯ ಏಳನೇ ನಂಬರ್ ಭವನದಲ್ಲಿರುವ ಅವಿಭಾಜ್ಯ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಪ್ರಧಾನ ಕಚೇರಿಯ ಸ್ವಾಧೀನ ಪಡೆಯಲು ಆಡಳಿತ ಕಾಂಗ್ರೆಸ್ ಪಕ್ಷ ಇಂದು ಸಾಂಕೇತಿಕ ಪ್ರಯತ್ನ ನಡೆಸಿತು.

ಸ್ವಾಧೀನ ಪಡೆಯುವ ಉದ್ದೇಶದಿಂದ ಪಕ್ಷದ ಕೆಲವು ಕಾರ್ಯಕರ್ತರೊಡನೆ ಇಂದು ಸಂಜೆ ಆಡಳಿತ ಕಾಂಗ್ರೆಸ್‌ನ ಪ‍್ರಧಾನ ಕಾರ್ಯದರ್ಶಿ ಡಾ. ಶಂಕರದಯಾಳ ಶರ್ಮಾ ಅಲ್ಲಿಗೆ ಹೋದರು. ಆದರೆ ಅಲ್ಲಿದ್ದ ಸಂಸ್ಥಾ ಕಾಂಗ್ರೆಸ್ ಕಾರ್ಯಕರ್ತರು ಅವರನ್ನು ಅಡ್ಡಗಟ್ಟಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.