ಬಜೆಟ್ ಅಧಿವೇಶನಕ್ಕೆ ಮುನ್ನ ಗಡಿ ಇತ್ಯರ್ಥ: ಮಹಾರಾಷ್ಟ್ರ ಆಗ್ರಹ
ಮುಂಬಯಿ, ಫೆ. 18: ಸಂಸತ್ತಿನ ಬಜೆಟ್ ಅಧಿವೇಶನಕ್ಕೆ ಮುಂಚೆಯೇ ಮೈಸೂರು– ಮಹಾರಾಷ್ಟ್ರ ಗಡಿ ವಿವಾದವನ್ನು ಇತ್ಯರ್ಥಪಡಿಸುವಂತೆ ಒತ್ತಾಯಪಡಿಸಲು ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ (ಆಡಳಿತ ಕಾಂಗ್ರೆಸ್) ಉನ್ನತಾಧಿಕಾರದ ನಿಯೋಗವೊಂದು ಪ್ರಧಾನಿ ಇಂದಿರಾ ಗಾಂಧಿ ಅವರನ್ನು ನವದೆಹಲಿಯಲ್ಲಿ ಶುಕ್ರವಾರ ಅಥವಾ ಶನಿವಾರ ಭೇಟಿ ಮಾಡುವುದು.
ಮಹಾರಾಷ್ಟ್ರದ ಮುಖ್ಯಮಂತ್ರಿ ವಿ.ಪಿ.ನಾಯಕ್, ಎಂ.ಪಿ.ಸಿ.ಸಿ ಅಧ್ಯಕ್ಷ ವಸಂತರಾವ್ ಪಾಟೀಲ್ ಹಾಗೂ ಇತರರು ಈ ನಿಯೋಗದಲ್ಲಿದ್ದಾರೆ.
ಬಿರ್ಲಾ ಸಂಸ್ಥೆಗಳ ತನಿಖೆಗೆ ಆಯೋಗ
ನವದೆಹಲಿ, ಫೆ. 18: ಬಿರ್ಲಾ ಗುಂಪಿನ ಕಂಪನಿಗಳ ವಿರುದ್ಧ ಆರೋಪಿಸಲಾಗಿರುವ ಕೆಲವು ಅಕ್ರಮಗಳ ತನಿಖೆಗೆ ಸುಪ್ರೀಂ ಕೋರ್ಟಿನ ಮಾಜಿ ಶ್ರೇಷ್ಠ ನ್ಯಾಯಾಧೀಶ ಎ.ಕೆ.ಸರ್ಕಾರ್ ನಾಯಕತ್ವದ ಏಕಸದಸ್ಯ ವಿಚಾರಣಾ ಆಯೋಗವನ್ನು ಕೇಂದ್ರ ಸರ್ಕಾರ ನೇಮಿಸಿದೆ.
ಕೈಗಾರಿಕಾ ಲೈಸೆನ್ಸ್ ನೀಡಿಕೆ ಕುರಿತ ದತ್ ಸಮಿತಿಯು ಬಿರ್ಲಾ ಸಂಸ್ಥೆಗಳ ಮೇಲೆ ಕೆಲವು ಅಕ್ರಮಗಳನ್ನು ಆಪಾದಿಸಿತ್ತು.
ಯು.ಪಿ., ಬಿಹಾರ ರಾಜ್ಯಪಾಲರ ವರ್ತನೆ: ಸಂಸತ್ತಿನಲ್ಲಿ ಚಕಮಕಿ ನಿರೀಕ್ಷೆ
ನವದೆಹಲಿ, ಫೆ. 18: ಮಂತ್ರಿಮಂಡಲ ರಚಿಸುವಂತೆ ಉತ್ತರ ಪ್ರದೇಶದಲ್ಲಿ ಶ್ರೀ ಚರಣಸಿಂಗ್ ಅವರನ್ನು, ಬಿಹಾರದಲ್ಲಿ ಶ್ರೀ ದರೋಗಾರಾಯ್ ಅವರನ್ನು ರಾಜ್ಯಪಾಲರು ಆಹ್ವಾನಿಸಿದ ಕ್ರಮದ ಔಚಿತ್ಯ ಕುರಿತು ಶುಕ್ರವಾರದಿಂದ ಆರಂಭವಾಗುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಕೆಲವು ವಿರೋಧ ಪಕ್ಷಗಳು ಪ್ರಶ್ನಿಸುವ ಸಂಭವವಿದೆ.
ಮಂತ್ರಿಮಂಡಲ ರಚನೆ ವಿಷಯವನ್ನು ಕೇಂದ್ರ ಸರ್ಕಾರವು ನಿಷ್ಪಕ್ಷಪಾತವಾಗಿ ನಿರ್ವಹಿಸುವುದರಲ್ಲಿ ವಿಫಲವಾಗಿದೆ ಎಂಬುದು ವಿರೋಧಿ ಕಾಂಗ್ರೆಸ್, ಸಂಯುಕ್ತ ಸೋಷಲಿಸ್ಟ್ ಪಕ್ಷ, ಜನಸಂಘ ಮತ್ತು ಸ್ವತಂತ್ರ ಪಕ್ಷಗಳ ಅಭಿಪ್ರಾಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.