ರಷ್ಯಾ ಗಗನಯಾತ್ರಿಗಳ ಮೇಲೆ ಗುಂಡು: ಒಬ್ಬನ ಬಂಧನ
ಮಾಸ್ಕೋ, ಜ. 23– ರಷ್ಯಾದ ಇತ್ತೀಚಿನ ಬಾಹ್ಯಾಕಾಶ ಸಾಹಸದ ವಿಜಯೋತ್ಸವ ಸಮಾರಂಭಕ್ಕೆ ಕ್ರೆಮ್ಲಿನ್ನತ್ತ ಹೋಗುತ್ತಿದ್ದ ರಷ್ಯಾ ಗಗನಯಾತ್ರಿಗಳ ಮೇಲೆ ಬುದ್ಧಿಭ್ರಮಣೆಯಾದ ವ್ಯಕ್ತಿಯೊಬ್ಬ ಗುಂಡು ಹಾರಿಸಿದ.
ಗಗನಯಾತ್ರಿಗಳಿದ್ದ ಕಾರಿನ ಚಾಲಕ, ಮೋಟಾರ್ ಸೈಕಲ್ ಸವಾರ ಪೊಲೀಸನೊಬ್ಬ ಗುಂಡಿನೇಟಿಗೆ ಗಾಯಗೊಂಡರು.
ಚುನಾವಣಾ ಪ್ರಚಾರ ಸಭೆಯಲ್ಲಿ ಗೊಂದಲ– ಪ್ರಧಾನಿ ಭಾಷಣ ತುಂಡು
ಅಲಿಘರ್, ಜ. 23– ಚುನಾವಣಾ ಪ್ರಚಾರ ಸಭೆಯಲ್ಲಿ ಗೊಂದಲವುಂಟಾಗಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ತಮ್ಮ ಭಾಷಣವನ್ನು ಅವಸರದಲ್ಲಿ ಮುಗಿಸಬೇಕಾಯಿತು.
ಸಂಯುಕ್ತ ಸಮಾಜವಾದಿ ಪಕ್ಷದ ಕೆಲವರು ಕಪ್ಪು ಧ್ವಜ ಪ್ರದರ್ಶನ ನಡೆಸಿದ ಕೆಲವು ಹೊತ್ತಿನ ನಂತರ ಗೊಂದಲ ಪ್ರಾರಂಭವಾಯಿತು. ಅವರು ಕಪ್ಪು ಧ್ವಜ ತೋರಿಸಿ ‘ಇಂದಿರಾ ಗಾಂಧಿ ಹಿಂದಕ್ಕೆ ಹೋಗಿ’ ಎಂದು ಕೂಗಿದ್ದರು.
ಸಭೆಯಲ್ಲಿ ಭಾಷಣ ಮಾಡುವಾಗ, ಇದನ್ನು ಶ್ರೀಮತಿ ಗಾಂಧಿ ಪ್ರಸ್ತಾಪಿಸಿ, ‘ನಾನು ಇಲ್ಲಿರುವುದು ಅವರಿಗೆ ಬೇಕಾಗಿಲ್ಲ, ಯಾಕೆಂದರೆ ಅವರಿಗೆ ನನ್ನ ಕಂಡರೆ ಹೆದರಿಕೆ’ ಎಂದು ಹೇಳಿದರು.
ಮಹಾಜನ್ ವರದಿ ಇತ್ಯರ್ಥ ಚವಾಣರ ಹೆಚ್ಚಿನ ಹೊಣೆ
ಬೆಂಗಳೂರು, ಜ. 23– ಮಹಾಜನ್ ಆಯೋಗದ ವರದಿಯ ಬಗ್ಗೆ ತೀರ್ಮಾನ ಕೈಗೊಳ್ಳುವಲ್ಲಿ ಕೇಂದ್ರ ಗೃಹಸಚಿವ ಶ್ರೀ ವೈ.ಬಿ. ಚವಾಣ್ ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆಯೆಂದು ಶಿಕ್ಷಣ ಸಚಿವ ಶ್ರೀ ಕೆ.ವಿ. ಶಂಕರಗೌಡ ಅವರು ಇಂದು
ವಿಧಾನಪರಿಷತ್ತಿನಲ್ಲಿ ಹೇಳಿದರು.
‘ಆಯೋಗದ ವರದಿಯನ್ನು ತೀರ್ಮಾನವೆಂದು ಸ್ವೀಕರಿಸುವುದೇ ಏಕೈಕ ಮಾರ್ಗ’ ಎಂದು ಸ್ಪಷ್ಟಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.