ADVERTISEMENT

ಶನಿವಾರ, 3–5–1969

​ಪ್ರಜಾವಾಣಿ ವಾರ್ತೆ
Published 2 ಮೇ 2019, 20:13 IST
Last Updated 2 ಮೇ 2019, 20:13 IST

ಸಮಾಜವಾದದಲ್ಲಿ ನಂಬಿಕೆ ಇಲ್ಲದವರಉಚ್ಚಾಟನೆಗೆ ಚಂದ್ರಶೇಖರ್ ಕರೆ
ಮದ್ರಾಸ್, ಮೇ 2– ಸಮಾಜವಾದದ ಆದರ್ಶಗಳು ಮತ್ತು ಗುರಿಗಳಲ್ಲಿ ನಂಬಿಕೆ ಇಲ್ಲದವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆಗೊಳಿಸಬೇಕೆಂದು ಸಂಸತ್ ಸದಸ್ಯ ಹಾಗೂ ವಾಮಪಂಥೀಯ ಕಾಂಗ್ರೆಸ್ ನಾಯಕ ಶ್ರೀ ಚಂದ್ರಶೇಖರ್ ಅವರು ಇಂದು ಇಲ್ಲಿ ತಿಳಿಸಿದರು.

ಪಕ್ಷವನ್ನು ಹೆಚ್ಚು ಪ್ರಗತಿಶೀಲ ಹಾಗೂ ಕ್ರಿಯಾಶಾಲಿಯನ್ನಾಗಿ ಮಾಡಲು ಇಂತಹ ಉಚ್ಚಾಟನೆ ಅಗತ್ಯವೆಂದು ಅವರು ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.

ಪಕ್ಷದಲ್ಲಿ ತಾತ್ವಿಕ ಭಿನ್ನಾಭಿಪ್ರಾಯಗಳ ಘರ್ಷಣೆ ಅನಿವಾರ್ಯ. ಏಕೆಂದರೆ ರಾಷ್ಟ್ರೀಯ ಚಳವಳಿಗೆ ಸೇರಿದವರೆಲ್ಲರೂ ಪಕ್ಷದ ಆದರ್ಶಗಳಲ್ಲಿ ನಂಬಿಕೆ ಉಳ್ಳವರಲ್ಲ. ಹಾಗೆಂದ ಮಾತ್ರಕ್ಕೆ ಕಾಂಗ್ರೆಸ್‌ ಸಂಸ್ಥೆ ಕುಸಿಯುತ್ತಿದೆಯೆಂಬ ಅರ್ಥವಾಗದು ಎಂದೂ ಅವರು ನುಡಿದರು.

ADVERTISEMENT

‘ರೈಲ್ವೆ ಪ್ಲಾಟ್‌ಫಾರ್ಮ್‌ಗಿಂತ ಹೊಲಸು’
ಪಲನಪುರ, ಮೇ 2– ‘ಕಾಂಗ್ರೆಸ್ ಈಗ ಒಂದು ಪಕ್ಷವೇ ಅಲ್ಲ. ಅದಕ್ಕೆ ಏಕರೂಪತೆಯನ್ನು ನೀಡಲು ಅದನ್ನು ‘ವಿಭಜಿಸ’ ಬೇಕಾದುದು ಅತ್ಯಗತ್ಯ. ಆ ಬಗ್ಗೆ ಸ್ಪಷ್ಟ ಕ್ರಮಗಳನ್ನು ತೆಗೆದುಕೊಳ್ಳಬೇಕು’‍ ಎಂದು ಶ್ರೀ ಎಸ್.ಕೆ. ಪಾಟೀಲ್ ಅವರು ಇಂದು ಇಲ್ಲಿ ಹೇಳಿದರು.

ತಾವು ಯಾವ ದಿಕ್ಕಿನಲ್ಲಿ ಹೋಗುತ್ತಿದ್ದೇವೆಂಬುದನ್ನರಿಯದ ಜನರ ಕೂಟ ಕಾಂಗ್ರೆಸ್ ಪಕ್ಷ. ಈಗ ಕಾಂಗ್ರೆಸ್ ಪಕ್ಷವು ರೈಲ್ವೆ ‍ಪ್ಲಾಟ್‌ಫಾರ್ಮ್‌ಗಿಂತ ಹೊಲಸಾಗಿದೆ. ಪ್ಲಾಟ್‌ಫಾರ್ಮ್‌ನಲ್ಲಿರುವ ಜನಗಳಿಗಾದರೂ ತಾವು ಎಲ್ಲಿ ಹೋಗುತ್ತೇವೆನ್ನುವುದು ಗೊತ್ತಿರುತ್ತದೆ. ಆದರೆ ಕಾಂಗ್ರೆಸ್‌ನಲ್ಲಿರುವವರಿಗೆ ಅದೂ ತಿಳಿಯದು ಎಂದು
ಶ್ರೀ ಪಾಟೀಲ್ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.