ಹಳೇ ಮೈಸೂರಿಗೆ ‘ಅನ್ಯಾಯ’ ಕುರಿತು ಚರ್ಚೆಗೆ ನಕಾರ
ಮೈಸೂರು, ಜೂನ್ 14– ಹಳೆಯ ಮೈಸೂರಿಗೆ ಆಗಿರುವ ಅನ್ಯಾಯ, ಅಭಿವೃದ್ಧಿಯ ಬಗ್ಗೆ ಇರುವ ತಾರತಮ್ಯವನ್ನು ಅಭ್ಯಸಿಸಲು ಸಮಿತಿಯೊಂದನ್ನು ರಚಿಸಬೇಕೆಂಬ ಖಾಸಗಿ ನಿರ್ಣಯವೊಂದನ್ನು ಇಂದು ಇಲ್ಲಿ ನಡೆದ ಪ್ರದೇಶ ಕಾಂಗ್ರೆಸ್ ಕಾರ್ಯ ಸಮಿತಿ ತಿರಸ್ಕರಿಸಿದೆ.
ಈ ನಿರ್ಣಯದ ಸೂಚಕರಾದ ಸಂಸತ್ ಸದಸ್ಯ ಶ್ರೀ ಎಂ.ವಿ. ಕೃಷ್ಣಪ್ಪ ಅವರು ಸಭೆಯಲ್ಲಿ ಹಾಜರಿದ್ದು, ಸಮಿತಿಯನ್ನು ರಚಿಸಬೇಕೆಂದು ಒತ್ತಾಯ ಮಾಡಿದರು.
ಹಳೆಯ ಮೈಸೂರು ಅಭಿವೃದ್ಧಿ ಬಗ್ಗೆ ತಾರತಮ್ಯವಿದೆ ಎಂಬ ಮಾತು ಕೇಳಿಬಂದೊಡನೆ ಸರ್ಕಾರ ಈ ಬಗ್ಗೆ ಅಂಕಿ ಅಂಶ ಸಂಗ್ರಹಿಸುತ್ತಿದ್ದು, ಸಂಬಂಧಪಟ್ಟ ಇತರ ಸೂಕ್ತ ಕ್ರಮಗಳನ್ನು ಕೈಗೊಂಡಿರುವುದರಿಂದ ಈ ನಿರ್ಣಯವನ್ನು ಎಂ.ಪಿ.ಸಿ.ಸಿ. ಮುಂದೆ ಮಂಡಿಸುವ ಅಗತ್ಯವಿಲ್ಲವೆಂದೂ, ಈ ವಿಷಯವನ್ನು ಕಾರ್ಯಸಮಿತಿಯ ಮಟ್ಟದಲ್ಲೇ ಚರ್ಚಿಸಬೇಕೆಂದು ಸಮಿತಿ ಅಭಿಪ್ರಾಯಪಟ್ಟಿತೆಂದೂ ತಿಳಿದುಬಂದಿದೆ.
ಮಂಚನಬೆಲೆ ಯೋಜನೆ ವರ್ಷಾಂತ್ಯದೊಳಗೆ ಆರಂಭ
ಚನ್ನಪಟ್ಟಣ, ಜೂನ್ 14– ಬೆಂಗಳೂರು ಗ್ರಾಮಾಂತರ ಜಿಲ್ಲೆಯ 3 ತಾಲ್ಲೂಕುಗಳಿಗೆ ನೀರಾವರಿ ಸೌಲಭ್ಯ ಒದಗಿಸಲಿರುವ ಮಂಚನಬೆಲೆ ಯೋಜನೆಯ ಕಾರ್ಯವನ್ನು ವರ್ಷಾಂತ್ಯದೊಳಗೆ ಆರಂಭಿಸುವ ಬಗ್ಗೆ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಇಂದು ಇಲ್ಲಿ ಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.