ADVERTISEMENT

50 ವರ್ಷಗಳ ಹಿಂದೆ: ಸೋಮವಾರ, 23–2–1970

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 23:20 IST
Last Updated 22 ಫೆಬ್ರುವರಿ 2020, 23:20 IST

ಇಂದಲ್ಲ ನಾಳೆ ಕಾಂಗ್ರೆಸ್‌ ಎರಡೂ ಬಣಗಳ ಐಕ್ಯ: ಎಸ್ಸೆನ್‌ ಆಶಾಭಾವನೆ
ಸಿಮ್ಲಾ, ಫೆ. 22:
ಇಂದಲ್ಲ ನಾಳೆ ಕಾಂಗ್ರೆಸ್ಸಿನ ಎರಡೂ ಬಣಗಳೂ ಪುನಃ ಒಂದುಗೂಡುವುದೆಂದು ವಿರೋಧಿ ಕಾಂಗ್ರೆಸ್‌ನ ಅಧ್ಯಕ್ಷ ಎಸ್‌. ನಿಜಲಿಂಗಪ್ಪನವರ ಆಶಾಭಾವನೆ.

ಇಂದು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ಈ ಆಶಾಭಾವನೆಯನ್ನು ವ್ಯಕ್ತಪಡಿಸಿದ ನಿಜಲಿಂಗಪ್ಪನವರು, ಕಾಂಗ್ರೆಸ್ಸಿನ ಎರಡೂ ಬಣಗಳು ಒಂದುಗೂಡಿದಲ್ಲಿ 1972ರಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುವವರೆಗೆ ಪ್ರಧಾನಮಂತ್ರಿ ಶ್ರೀಮತಿ ಇಂದಿರಾಗಾಂಧಿಯವರನ್ನು ಪದಚ್ಯುತಗೊಳಿಸುವುದಿಲ್ಲವೆಂದು ನುಡಿದರು.

ಮುಂದಿನ ಸಾರ್ವತ್ರಿಕ ಚುನಾವಣೆಯ ನಂತರ ಕೇಂದ್ರ ಮತ್ತು ಬಹುತೇಕ ರಾಜ್ಯಗಳಲ್ಲಿ ಸಮ್ಮಿಶ್ರ ಸರಕಾರಗಳು ಅಧಿಕಾರಕ್ಕೆ ಬರುವವೆಂದು ಅವರು ಹೇಳಿದರು.

ADVERTISEMENT

ಪ್ರತ್ಯೇಕ ತೆಲಂಗಾಣ: ಬೇಡಿಕೆ ಈಡೇರದಿದ್ದರೆ ಭಾರಿ ಗಲಭೆ, ಗೊಂದಲ
ಹೈದರಾಬಾದ್‌, ಫೆ. 22:
ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯ ಬೇಡಿಕೆಯನ್ನು ಕೇಂದ್ರ ಸರಕಾರ ಅಲಕ್ಷಿಸುತ್ತಾ ಹೋದರೆ, ತೆಲಂಗಾಣ ಜನರು ಯಾರಿಂದಲೂ ಹತೋಟಿಗೆ ತರಲು ಸಾಧ್ಯವಾಗದಂತಹ ಭಾರಿ ಗಲಭೆ, ಗೊಂದಲವನ್ನುಂಟುಮಾಡುವರು ಎಂದು ತೆಲಂಗಾಣ ಪ್ರಜಾ ಸಮಿತಿ ಅಧ್ಯಕ್ಷ ಡಾ.ಎಂ.ಚೆನ್ನಾರೆಡ್ಡಿ ಇಂದು ಇಲ್ಲಿ ಎಚ್ಚರಿಸಿದರು.

ನಾಳೆಯಿಂದ ಆರಂಭವಾಗಲಿರುವ ತೆಲಂಗಾಣ ಚಳವಳಿಯ ಎರಡನೆ ಹಂತದ ಸಂಬಂಧವಾಗಿ ಇಂದು ನಡೆದ ಬೃಹತ್‌ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

ಕಾವೇರಿ ಜಲವಿವಾದ: ನ್ಯಾಯಮಂಡಳಿ ನೇಮಕಕ್ಕೆ ಕರುಣಾನಿಧಿ ಒತ್ತಾಯ ಖಚಿತ
ತಿರುಚಿನಾಪಳ್ಳಿ, ಫೆ. 22: ಕಾವೇರಿ ಜಲವಿವಾದ ಪರಿಹಾರಕ್ಕೆ ನ್ಯಾಯಮಂಡಳಿಯೊಂದನ್ನು ನೇಮಿಸಬೇಕೆಂದು ತಾವು ಹೇಳಿರುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರು ಇಂದು ಖಚಿತಪಡಿಸಿದ್ದಾರೆ.

ಯಾವ ಪರಿಹಾರವೇ ಆಗಲಿ 1924ರ ಒಪ್ಪಂದದ ಮೇಲೆ ಆಧಾರಿತವಾಗಿರಬೇಕೆಂಬ ತಮ್ಮ ಬೇಡಿಕೆಯನ್ನು ಸಂಧಾನಗಳು ಈಡೇರಿಸುವುದೆಂಬ ಭರವಸೆ ಕಳೆದುಹೋಗುತ್ತಿದೆಯೆಂದು ವರದಿಗಾರರಿಗೆ ಕರುಣಾನಿಧಿ ತಿಳಿಸಿದ್ದಾರೆ. ಆದ್ದರಿಂದಲೇ ನ್ಯಾಯಮಂಡಳಿ ನೇಮಿಸಬೇಕೆಂದು ತಾವು ಹೇಳಿರುವುದಾಗಿ ಅವರು ಹೇಳಿದರು.

‘ನಿರ್ಧಾರ ತಿಳಿಸಲು ನ್ಯಾಯಮಂಡಳಿಗೆ ದೀರ್ಘಕಾಲ ಬೇಕಾಗಬಹುದಾದರೂ ಈ ವಿವಾದ ಪರಿಹಾರಕ್ಕೆ ಬೇರೆ ಮಾರ್ಗ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.