ಕಾವೇರಿ ಯೋಜನೆಗಳನ್ನುನಿಲ್ಲಿಸುವುದಿಲ್ಲ: ವಿಧಾನಸಭೆಗೆ ವೀರೇಂದ್ರ ಪಾಟೀಲ್ ಭರವಸೆ
ಬೆಂಗಳೂರು, ಮಾರ್ಚ್ 5– ಕಾವೇರಿ ಬಯಲಿನಲ್ಲಿ ಕೆಲಸ ಮುಂದುವರಿಯುತ್ತಿರುವ ನೀರಾವರಿ ಯೋಜನೆಗಳನ್ನು ಸರ್ಕಾರ ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಕಾತರಗೊಂಡಿದ್ದ ವಿಧಾನಸಭೆಗೆ ಇಂದು ಭರವಸೆ ನೀಡಿದರು.
ಯೋಜನಾ ಆಯೋಗದ ಮಂಜೂರಾತಿಯಿಲ್ಲದ ಯೋಜನೆಗಳ ಕಾರ್ಯವನ್ನು ನಿಲ್ಲಿಸುವ ಭರವಸೆ ಕೇಳಿ ಕೇಂದ್ರ ಕಳುಹಿಸಿದ ಸೂಚನೆಯ ಸಂಬಂಧ ಈ ಹೇಳಿಕೆ ನೀಡಿದ್ದಾರೆ.
ಆಸ್ತಿ ತೆರಿಗೆ, ಮಾರಾಟ ತೆರಿಗೆ ಸ್ವರೂಪದಲ್ಲಿ ಸ್ವಲ್ಪ ಮಾರ್ಪಾಡು: ಅರ್ಥ ಸಚಿವ ಹೆಗಡೆ ಭರವಸೆ
ಬೆಂಗಳೂರು, ಮಾರ್ಚ್ 5– ನಗರ ಪ್ರದೇಶಗಳ ಆಸ್ತಿಯ ಮೇಲೆ ಬಜೆಟ್ನಲ್ಲಿ ತಾವು ವಿಧಿಸಲು ಉದ್ದೇಶಿಸಿರುವ ತೆರಿಗೆಯ ಸ್ವರೂಪದಲ್ಲಿ ಕೆಲವೊಂದು ಬದಲಾವಣೆಮಾಡಲು ತಾವು ಉದ್ದೇಶಿಸಿರುವುದಾಗಿ ಅರ್ಥ ಸಚಿವ ಶ್ರೀ ರಾಮಕೃಷ್ಣ ಹೆಗಡೆ ಅವರು ವಿಧಾನಸಭೆಯಲ್ಲಿ ಪ್ರಕಟಿಸಿದರು.
‘ಕೇಂದ್ರ ಬಜೆಟ್ನಿಂದ ಆಗಿರುವ ಪರಿಣಾಮ ಹಾಗೂ ಸಭೆಯಲ್ಲಿ ನಡೆದ ಚರ್ಚೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳ ಬೆಳಕಿನಲ್ಲಿ ಆಸ್ತಿ ತೆರಿಗೆಯಲ್ಲಿ ಸ್ವಲ್ಪಮಟ್ಟಿಗೆ ಮಾರ್ಪಾಟು ಮಾಡಲು ನಾನು ಸಿದ್ಧನಿದ್ದೇನೆ’ ಎಂದು ಸಚಿವರು ತಿಳಿಸಿದರು.
ನೀರಾವರಿ ಯೋಜನೆ ಜತೆ ಪ್ರವಾಹ ಹತೋಟಿಗೂ ರಾಜ್ಯ ಸರ್ಕಾರದ ಸಲಹೆ
ಬೆಂಗಳೂರು, ಮಾರ್ಚ್ 5– ದೊಡ್ಡ ಮತ್ತು ಮಧ್ಯಮ ಪ್ರಮಾಣದ ನೀರಾವರಿ ಯೋಜನೆಗಳೊಡನೆ ಪ್ರವಾಹ ಹತೋಟಿ ಯೋಜನೆಗಳನ್ನು 4ನೇ ಯೋಜನೆಯಲ್ಲಿ ಸೇರಿಸಿಕೊಳ್ಳಬೇಕೆಂದು ಸರ್ಕಾರ ಸಲಹೆ ಮಾಡಿದೆ ಎಂದು ನೀರಾವರಿ ಶಾಖೆಯ ಉಪ ಸಚಿವ ಶ್ರೀ ಡಿ. ಪರಮೇಶ್ವರಪ್ಪ ಅವರು ವಿಧಾನಪರಿಷತ್ತಿನಲ್ಲಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.