ರಾಜಧನ, ವಿಶೇಷ ಹಕ್ಕು ರದ್ದತಿಗೆ ಎರಡು ಮಸೂದೆ
ನವದೆಹಲಿ, ಏ. 26– ಸಂವಿಧಾನಕ್ಕೆ ತಿದ್ದುಪಡಿ ತರುವ ಮಸೂದೆಯೊಂದನ್ನು ಮಾಜಿ ರಾಜರ ವಿಶೇಷ ಹಕ್ಕುಬಾಧ್ಯತೆ ರದ್ದು ಮಾಡಲು ಅವಕಾಶವಿರುವ ಮತ್ತೊಂದು ಮಸೂದೆಯನ್ನು ಸಂಸತ್ತಿನ ಪ್ರಸಕ್ತ ಅಧಿವೇಶನದಲ್ಲಿ ಮಂಡಿಸಲಾಗುವುದು.
ಈ ವಿಷಯವನ್ನು ಉಭಯ ಸದನಗಳ ಕಾರ್ಯಾಲಯಗಳಿಗೆ ಸರ್ಕಾರ ಈಗಾಗಲೇ ತಿಳಿಸಿದೆ.
ಮಾಜಿ ರಾಜರಿಗಿರುವ ವಿಶೇಷ ಹಕ್ಕುಗಳನ್ನು ರದ್ದು ಮಾಡಬೇಕಾದರೆ, ಜಾರಿಯಲ್ಲಿರುವ ಕೆಲವೊಂದು ಕೇಂದ್ರ ಕಾನೂನುಗಳನ್ನು ತಿದ್ದಬೇಕಾಗುವುದು. ಉದಾಹರಣೆಗೆ, ಕೆಲವೊಂದು ವಸ್ತುಗಳ ವಿಷಯದಲ್ಲಿ ಮಾಜಿ ರಾಜರಿಗೆ ವಿದೇಶಿ ಸುಂಕ ವಿನಾಯಿತಿ ಇದೆ. ಆದ್ದರಿಂದ ಸಮುದ್ರ ಸುಂಕ ಶಾಸನವನ್ನು ತಿದ್ದಬೇಕಾಗುವುದು.
ಹಿಮಾಚಲ ಪ್ರದೇಶಕ್ಕೆ ಶೀಘ್ರದಲ್ಲೇ ರಾಜ್ಯ ಸ್ಥಾನಮಾನ
ಮುಂಬಯಿ, ಏ. 26– ಕೇಂದ್ರಾಡಳಿತ ಪ್ರದೇಶವಾಗಿರುವ ಹಿಮಾಚಲ ಪ್ರದೇಶಕ್ಕೆ ಅತಿ ಶೀಘ್ರದಲ್ಲೇ ರಾಜ್ಯ ಸ್ಥಾನಮಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ವೈ.ಎಸ್.ಪಾರ್ಮಾರ್ ಇಂದು ಸುದ್ದಿಗಾರರಿಗೆ ತಿಳಿಸಿದರು.
ಮುಖ್ಯಮಂತ್ರಿಯೊಂದಿಗೆ ಇಲ್ಲಿಗೆ ಆಗಮಿಸಿದ ಸಂಸತ್ ಸದಸ್ಯೆ ಶ್ರೀಮತಿ ಸತ್ಯವತಿ ಡಾಂಗ್ ಅವರು ‘ಮುಂದಿನ ಸಂಸತ್ ಅಧಿವೇಶನದೊಳಗಾಗಿ ರಾಜ್ಯ ಸ್ಥಾನಮಾನ ಪಡೆಯಲಿರುವ ತಮ್ಮ ರಾಜ್ಯವು ರಾಜ್ಯ ಸ್ಥಾನಮಾನ ಪಡೆಯುವ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮೊತ್ತ ಮೊದಲನೆಯದು’ ಎಂದು ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.