ಕಾಸರಗೋಡು ಬಗ್ಗೆ ಎಸ್ಎನ್ಗೆ ಆಸಕ್ತಿ ಇಲ್ಲ?: ಕೇರಳ ಪತ್ರಿಕಾ ವರದಿಗಳ ಬಗ್ಗೆ ಕಳವಳ
ಕಾಸರಗೋಡು, ಜೂನ್ 4– ಕಾಸರಗೋಡನ್ನು ಮೈಸೂರಿಗೆ ಸೇರಿಸಬೇಕೆಂಬ ಕೇಳಿಕೆ ಬಗ್ಗೆ ತಮಗೆ ಆಸಕ್ತಿಯಿಲ್ಲವೆಂದು ಭಾರತ ಸಂಸ್ಥಾ ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್.ನಿಜಲಿಂಗಪ್ಪ ಮತ್ತು ಮೈಸೂರು ಪ್ರದೇಶ ಸಂಸ್ಥಾ ಕಾಂಗ್ರೆಸ್ ಅಧ್ಯಕ್ಷ ಡಾ. ನಾಗಪ್ಪ ಆಳ್ವ ಅವರು ತಿಳಿಸಿದರೆಂದು ಕೇರಳದ ಸಂಸತ್ ಸದಸ್ಯ ಶ್ರೀ ಹಮೀದ್ ಆಲಿ ಶೆಮ್ನಾಡ್ ಅವರು ಹೇಳಿದ್ದಾರೆ.
‘ಮೈಸೂರಿನಲ್ಲಿ ಕಾಸರಗೋಡಿನ ವಿಲೀನದ ಬಗ್ಗೆ ನಮಗೆ ಆಸಕ್ತಿಯಿಲ್ಲ. ಆ ಪ್ರಶ್ನೆಯನ್ನು ಈಗ ಎತ್ತಲು ನಮ್ಮ ವಿರೋಧವಿದೆ’ ಎಂದು ಶ್ರೀ ನಿಜಲಿಂಗಪ್ಪ ಮತ್ತು ಡಾ. ನಾಗಪ್ಪ ಆಳ್ವ ಅವರು ಹೇಳಿದರೆಂದು ಅರ್ಥ ಬರುವ ಶ್ರೀ ಹಮೀದ್ ಆಲಿ ಅವರ ಹೇಳಿಕೆಯನ್ನು ಮಲಯಾಳಂ ಪತ್ರಿಕೆಗಳು ಪ್ರಧಾನವಾಗಿ ಪ್ರಕಟಿಸಿವೆ. ಮೇಲ್ಕಂಡ ವರದಿಯು ಕಾಸರಗೋಡಿನ ಕನ್ನಡಿಗರಲ್ಲಿ ತೀವ್ರ ಕಳವಳ ಮೂಡಿಸಿದೆ.
ತೃತೀಯ ವೇತನ ಆಯೋಗ: ತಾತ್ಕಾಲಿಕ ಪರಿಹಾರ ಬೇಡಿಕೆ ಪರಿಶೀಲನೆಗೆ ಅವಕಾಶ
ನವದೆಹಲಿ, ಜೂನ್ 4– ಅಗತ್ಯ ಆಧಾರಿತ ಕನಿಷ್ಠ ವೇತನ ಹಾಗೂ ತಾತ್ಕಾಲಿಕ ಪರಿಹಾರ ಬೇಕೆಂಬ ಕೇಂದ್ರ ನೌಕರರ ಬೇಡಿಕೆಗಳನ್ನು ಪರಿಶೀಲಿಸಲು ಅನುಕೂಲವಾಗುವಂತೆ ತೃತೀಯ ವೇತನ ಆಯೋಗ ಪರಿಶೀಲಿಸಬೇಕಾದ ಅಂಶಗಳನ್ನು ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದೆ.
15ನೇ ಭಾರತೀಯ ಕಾರ್ಮಿಕ ಸಮ್ಮೇಳನದ ಶಿಫಾರಸುಗಳನ್ನು ಗಣನೆಗೆ ತೆಗೆದುಕೊಂಡು ವೇತನ ಆಯೋಗ ಪರಿಶೀಲಿಸಬೇಕಾದ ಅಂಶಗಳನ್ನು ನಿಖರಗೊಳಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.