ಉರ್ದು ವಾರ್ತೆ: ಗೋಕಾಕ್ ಮಾದರಿ ಚಳವಳಿ ಬೆದರಿಕೆ
ಬೆಂಗಳೂರು, ಅ. 5– ಬೆಂಗಳೂರು ದೂರದರ್ಶನ ಕೇಂದ್ರದಿಂದ ಪ್ರಸಾರವಾಗುತ್ತಿರುವ ಉರ್ದು ವಾರ್ತೆಯನ್ನು ಒಂದು ವಾರದೊಳಗೆ ನಿಲ್ಲಿಸದಿದ್ದರೆ ಗೋಕಾಕ್ ಮಾದರಿಯ ಚಳವಳಿ ಆರಂಭಿ ಸುವುದಾಗಿ ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಇಂದು ಬೆದರಿಕೆ ಹಾಕಿದೆ.
ಕನ್ನಡದ ಉಳಿವಿಗಾಗಿ ನಡೆಯುವ ಈ ಹೋರಾಟಕ್ಕೆ ಸಾಹಿತ್ಯ ಪರಿಷತ್ ಕೂಡ ನೈತಿಕ ಬೆಂಬಲ ಸೂಚಿಸಿದೆ. ಚಲನಚಿತ್ರನಟ
ಡಾ.ರಾಜಕುಮಾರ್ ಅವರಿಗೂ ಚಳವಳಿಯಲ್ಲಿ ಪಾಲ್ಗೊಳ್ಳುವಂತೆ ಕೋರಿ ಪತ್ರ ಬರೆಯಲು ಹಾಗೂ ಕನ್ನಡ ವಿರೋಧಿ ಪಕ್ಷಗಳಿಗೆ ಮತ ನೀಡದಂತೆ ಮನವಿ ಮಾಡಲೂ ತೀರ್ಮಾನಿಸಲಾಗಿದೆ. ಚಳವಳಿಯನ್ನು ಉಗ್ರ ಸ್ವರೂಪವಾಗಿಸುವ ಉದ್ದೇಶ ದಿಂದ ಎಲ್ಲ ಸಂಘಟನೆಗಳನ್ನು ಒಂದೇ ವೇದಿಕೆಗೆ ತರುವ ನಿರ್ಧಾರವನ್ನೂ ತೆಗೆದುಕೊಳ್ಳ ಲಾಗಿದೆ.
ಜಿಲ್ಲಾ ಕಾಂಗೈ ಅಧ್ಯಕ್ಷರಿಗೆ ಸ್ಪರ್ಧಿಸಲು ಅವಕಾಶ
ನವದೆಹಲಿ ಅ. 5– ಕರ್ನಾಟಕ ಸೇರಿದಂತೆ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಚುನಾವಣೆ ನಡೆಯಲಿರುವ ನಾಲ್ಕು ರಾಜ್ಯಗಳಿಗೆ ಪ್ರತ್ಯೇಕ ಚುನಾ ವಣೆ ಸಮಿತಿ ಮತ್ತು ಪ್ರಚಾರ ಸಮಿತಿ ರಚಿಸುವ ಅಧಿಕಾರವನ್ನು ಇಂದು ಇಲ್ಲಿ ಸಭೆ ಸೇರಿದ್ದ ಕಾಂಗ್ರೆಸ್ (ಐ) ಕಾರ್ಯಕಾರಿ ಸಮಿತಿ ಪಕ್ಷದ ಅಧ್ಯಕ್ಷರೂ ಆದಪ್ರಧಾನಿ ಪಿ.ವಿ. ನರಸಿಂಹರಾವ್ ಅವರಿಗೆ ನೀಡಿತು. ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರನ್ನು ಹೊರತುಪಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರುಗಳು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲು ಕಾರ್ಯಕಾರಿಣಿ ಒಪ್ಪಿತು ಎಂದು ಪಕ್ಷದ ವಕ್ತಾರ ವಿ.ಎನ್. ಗಾಡ್ಗೀಳ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪ್ಲೇಗ್: ರಾಜ್ಯದಲ್ಲಿ ಹೊಸ ಪ್ರಕರಣ ವರದಿ ಇಲ್ಲ
ಬೆಂಗಳೂರು, ಅ. 5– ರಾಜ್ಯದಲ್ಲಿ ಪ್ಲೇಗ್ ರೋಗದ ಹೊಸ ಪ್ರಕರಣಗಳು ಎಲ್ಲೂ ವರದಿಯಾಗಿಲ್ಲ ಎಂದು ರೇಷ್ಮೆಖಾತೆ ರಾಜ್ಯ ಸಚಿವ ಹಾಗೂ ಸರ್ಕಾರದ ವಕ್ತಾರ ಡಾ.ಜಿ. ಪರಮೇಶ್ವರ ಅವರು ಇಂದು ಇಲ್ಲಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.