ADVERTISEMENT

50 ವರ್ಷದ ಹಿಂದೆ | ಕಪ್ಪುಹಣ, ತೆರಿಗೆ ಕಳ್ಳತನದ ವಿರುದ್ಧ ಕ್ರಮಕ್ಕಾಗಿ ಸಚಿವರ ಆದೇಶ

ಬುಧವಾರ, ಸೆಪ್ಟೆಂಬರ್‌ 11, 1974

ಪ್ರಜಾವಾಣಿ ವಿಶೇಷ
Published 10 ಸೆಪ್ಟೆಂಬರ್ 2024, 23:21 IST
Last Updated 10 ಸೆಪ್ಟೆಂಬರ್ 2024, 23:21 IST
   

ಕಪ್ಪುಹಣ, ತೆರಿಗೆ ಕಳ್ಳತನದ ವಿರುದ್ಧ ತೀವ್ರ ಕ್ರಮಕ್ಕಾಗಿ ಸಚಿವರ ಆದೇಶ

ನವದೆಹಲಿ, ಸೆ. 10– ಕಳ್ಳಹಣದಿಂದ ವಹಿವಾಟು ನಡೆಸುವವರು ಮತ್ತು ತೆರಿಗೆಗಳ್ಳರನ್ನು ಪತ್ತೆ ಮಾಡುವ ಕ್ರಮಗಳನ್ನು ಮತ್ತಷ್ಟು ತೀವ್ರಗೊಳಿಸುವಂತೆ ಕೇಂದ್ರ ಹಣಕಾಸು ಸಚಿವ ಶಾಖೆಯು ವರಮಾನ ತೆರಿಗೆ ಇಲಾಖೆಗೆ ಆದೇಶಿಸಿದೆ.

ಆದಾಯ ತೆರಿಗೆ ಕಮಿಷನರುಗಳಿಗೆ ಹಣಕಾಸು ಖಾತೆ ರಾಜ್ಯ ಸಚಿವ ಕೆ.ಆರ್. ಗಣೇಶ್‌ರವರು ಪತ್ರವೊಂದನ್ನು ಬರೆದು, ಉತ್ಪಾದನೆಯನ್ನು ಬಚ್ಚಿಡುವ ಹಾಗೂ ಈಗ ಅಭಾವವಿರುವ ಸಾಮಾನ್ಯ ಬಳಕೆ ವಸ್ತುಗಳ ಅಕ್ರಮ ದಾಸ್ತಾನು ಮತ್ತು ಕಳ್ಳಪೇಟೆಯಲ್ಲಿ ತೊಡಗಿರುವವರ ವಿರುದ್ಧ ಗಮನವನ್ನು ಕೇಂದ್ರೀಕರಿಸುವಂತೆ ತಿಳಿಸಿದ್ದಾರೆ.

ADVERTISEMENT

ತೆರಿಗೆಗಳಿಂದ ತಪ್ಪಿಸಿಕೊಳ್ಳಲು ಮೌಲ್ಯ ಕಡಿಮೆ ನೀಡಿರುವ ಸ್ಥಿರ ಆಸ್ತಿಗಳನ್ನು ವಶಪಡಿಸಿಕೊಳ್ಳುವುದಕ್ಕೆ ವಿಶೇಷ ಗಮನ ನೀಡುವಂತೆಯೂ ಸೂಚಿಸಲಾಗಿದೆ.

***

ರಾಜ್ಯಗಳಿಗೆ ಇನ್ನಷ್ಟು ಹೆಚ್ಚು ಸೀಮೆಎಣ್ಣೆ; ಶೇ 10 ಖೋತಾ ರದ್ದು

ನವದೆಹಲಿ, ಸೆ. 10– ರಾಜ್ಯಗಳಿಗೆ ಒದಗಿಸುವ ಸೀಮೆಎಣ್ಣೆಯಲ್ಲಿ ಈವರೆಗೆ ಇದ್ದ ಖೋತಾವನ್ನು ಭಾಗಶಃ ತುಂಬಿಸಲಾಗಿದೆ.

ಜೂನ್ ಒಂದನೇ ತಾರೀಕಿನಿಂದ ಅದರ ಖೋತಾ ಶೇ 30ರಷ್ಟು ಇತ್ತು. ಆದರೆ ಸೆಪ್ಟೆಂಬರ್ ಒಂದರಿಂದ ಅದು ಶೇ 20ರಷ್ಟು ಮಾತ್ರ ಆಗಿರುತ್ತದೆ.

ರಾಜ್ಯಗಳಿಗೆ ಸೀಮೆಎಣ್ಣೆ ಖೋತಾ ಜನವರಿಯಿಂದ ಪ್ರಾರಂಭವಾಯಿತು. ಮೊದಲು ಶೇ 15ರಷ್ಟು ಮಾತ್ರ ಇದ್ದ ಅದು ಫೆಬ್ರುವರಿಯಲ್ಲಿ ಶೇ 20ಕ್ಕೆ ಏರಿತು. ಆದರೆ ಮಾರ್ಚ್‌ನಲ್ಲಿ ಅದು ಮೊದಲು ಶೇ 15ಕ್ಕೆ ಇಳಿದು ಏಪ್ರಿಲ್‌ನಲ್ಲಿ ಶೇ 25ಕ್ಕೆ ಏರಿತು. ಪುನಃ ಮೇ ತಿಂಗಳಿನಲ್ಲಿ ಅದು ಶೇ 20ಕ್ಕೆ ಇಳಿದು ಜೂನ್‌ನಿಂದ ಆಗಸ್ಟ್‌ವರೆಗೆ ಶೇ 30ರಷ್ಟು ಖೋತಾ ಜಾರಿಯಲ್ಲಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.