ಕುಲಗೆಡುವ ಮತಗಳನ್ನು ಕಡಿಮೆ ಮಾಡಲು ಗುರುತಿನ ಸ್ವರೂಪ ಬದಲಾವಣೆ
ಬೆಂಗಳೂರು, ಫೆ. 1–ಮತದಾನದಲ್ಲಿ ಮತಗಳು ಕುಲಗೆಡುವುದನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಲು ಚುನಾವಣೆ ಆಯೋಗವು ಮತದಾರ ಒತ್ತುವ ಗುರುತಿನ ಸ್ವರೂಪವನ್ನು ಬದಲಾಯಿಸಿದೆ.
ಇಲ್ಲಿಯವರೆಗೆ ಮತದಾರರು ತಾವು ಬೆಂಬಲ ನೀಡುವ ಅಭ್ಯರ್ಥಿಯ ಸಂಕೇತದ ಮುಂದೆ ಆವೃತ್ತದೊಳಗಿನ ಕ್ರಾಸ್ ಮುದ್ರೆಯನ್ನು ಒತ್ತುತ್ತಿದ್ದರು. ವೋಟಿನ ಚೀಟಿಯನ್ನು ಮಡಿಸಿ ಹಾಕಿದಾಗ ಈ ಗುರುತು ಬೇರೆ ಕಡೆಯೂ ಬೀಳುವ ಸಂದರ್ಭಗಳಿದ್ದು, ಎಣಿಕೆ ಕಾಲದಲ್ಲಿ ವಿವಾದಗಳೇಳುತ್ತಿದ್ದವು. ಎಷ್ಟೋ ಮತಗಳು ಕುಲಗೆಡುತ್ತಿದ್ದವು.
ಈಗ ಹೊಸ ಗುರುತಿನಲ್ಲಿ ಬಾಣದ ಮೊನಚುಗಳಿವೆ. ಈ ಗುರುತಿನ ಪ್ರತಿಗುರುತು ಬೇರೆ ಕಡೆ ಬಿದ್ದರೂ ಅದು ತಿರುಗುಮುರುಗಾಗಿ ಬೀಳುವುದರಿಂದ ಮತದಾರನ ಇಚ್ಛೆ ಏನಾಗಿತ್ತೆಂಬುದನ್ನು ಸ್ಪಷ್ಟವಾಗಿ ತಿಳಿಯಲು ಸಾಧ್ಯವಾಗುತ್ತದೆ.
ಅಪಹೃತ ವಿಮಾನದಲ್ಲಿ ಇದ್ದವರೆಲ್ಲ ಭೂಮಾರ್ಗದಲ್ಲಿ ಭಾರತಕ್ಕೆ ವಾಪಸು
ನವದೆಹಲಿ, ಫೆ. 1–ಪಿಸ್ತೂಲಿನ ಬೆದರಿಕೆ ಒಡ್ಡಿ ಬಲಾತ್ಕಾರವಾಗಿ ಲಾಹೋರಿಗೆ ಅಪಹರಿಸಿಕೊಂಡು ಹೋಗಿದ್ದ ಭಾರತೀಯ ವಿಮಾನದ ನಾಲ್ವರು ಚಾಲಕ ವರ್ಗದವರು ಮತ್ತು 26 ಮಂದಿ ಪ್ರಯಾಣಿಕರು, ಪಾಕಿಸ್ತಾನದ ಪೊಲೀಸರ ಉಸ್ತುವಾರಿಯಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಸ್ವದೇಶಕ್ಕೆ ಸುರಕ್ಷಿತವಾಗಿ ವಾಪಸಾದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.