ರಾಜ್ಯದ ಎಂಟು ಕಡೆ ಗುಂಡು: 5 ಸಾವು, 13 ಜನಕ್ಕೆ ಪೆಟ್ಟು
ಬೆಂಗಳೂರು, ಅ. 3– ಕಳೆದ ಇಪ್ಪತ್ತು ದಿನಗಳಲ್ಲಿ ರಾಜ್ಯದ ನಾನಾ ಕಡೆಗಳಲ್ಲಿ ಉದ್ರಿಕ್ತ ಜನರ ಗುಂಪನ್ನು ಚದುರಿಸಲು ಪೊಲೀಸರು 8 ಕಡೆಗಳಲ್ಲಿ ಗೋಲಿಬಾರ್ ಮಾಡಿದ್ದರಿಂದ 5 ಮಂದಿ ಸತ್ತು, 13 ಮಂದಿ ಗಾಯಗೊಂಡಿದ್ದಾರೆ. ನಾಲ್ಕು ಕಡೆಗಳಲ್ಲಿ ಪೊಲೀಸರು ಬೆದರುಗುಂಡನ್ನು ಹಾರಿಸಿ ಗುಂಪನ್ನು ಚದುರಿಸಿದರು. ಇದಲ್ಲದೆ ಹಲವು ಬಾರಿ ಅಶ್ರುವಾಯು ಹಾಗೂ ಲಾಠಿ ಪ್ರಯೋಗ ಮಾಡಬೇಕಾಯಿತು.
ಹಾಸನದ ಪೊಲೀಸ್ ಠಾಣೆಯಲ್ಲಿ ಯುವಕನೊಬ್ಬನ ಮರಣ ಹಾಗೂ ಬೆಲೆ ಏರಿಕೆ ಮತ್ತು ಆಹಾರ ಅಭಾವದ ಪ್ರಯುಕ್ತ ನಾನಾ ಕಡೆ ಏರ್ಪಡಿಸಲಾಗಿದ್ದ ಮೆರವಣಿಗೆಗಳು ಹಾಗೂ ಪ್ರದರ್ಶನಗಳು ಕಲ್ಲು ತೂರಾಟದಲ್ಲಿ, ಅಂಗಡಿಗಳ ಮತ್ತು ರೈಲ್ವೆ ವಾಗೀನುಗಳ ಲೂಟಿಯಲ್ಲಿ ಪರ್ಯವಸಾನಗೊಂಡಿದ್ದವು.
ಪ್ರಾಚೀನ ಕನ್ನಡ ಸಾಹಿತ್ಯ ಗ್ರಂಥಗಳ ಗದ್ಯಾನುವಾದ ಪ್ರಕಟಣೆ:
ಪರಿಷತ್ ಯೋಜನೆ
ಬೆಂಗಳೂರು, ಅ. 3– ಅಮೂಲ್ಯವಾದ ಕನ್ನಡ ಪ್ರಾಚೀನ ಕಾವ್ಯ ಸಂಪತ್ತನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ಹಳಗನ್ನಡ ಮತ್ತು ನಡುಗನ್ನಡ ಗ್ರಂಥಗಳನ್ನು ಹೊಸಗನ್ನಡ ಗದ್ಯ ರೂಪದಲ್ಲಿ ಪ್ರಕಟಿಸಲು ಕನ್ನಡ ಸಾಹಿತ್ಯ ಪರಿಷತ್ತು ಬೃಹತ್ ಯೋಜನೆ ಹಾಕಿಕೊಂಡಿದೆ.
ಪಂಡಿತರು ಮತ್ತು ಶ್ರೀಸಾಮಾನ್ಯರಿಗೆ ಅನುಕೂಲವಾಗುವಂತೆ ಮೂಲಸಹಿತವಾಗಿ ಪ್ರಕಟಣೆ ಮಾಡಲಾಗುವುದೆಂದು ಪರಿಷತ್ತಿನ ಅಧ್ಯಕ್ಷ ಜಿ.ನಾರಾಯಣ ಅವರು ಇಂದು ವರದಿಗಾರರಿಗೆ ತಿಳಿಸಿ, ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಸುಲಭ ಬೆಲೆಯಲ್ಲಿ ಮಾರಾಟ ಮಾಡುವುದಕ್ಕಾಗಿ ಸರ್ಕಾರ ನೆರವು ನೀಡುವುದೆಂದು ಆಶಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.