ಮೈಸೂರು–ಮಹಾರಾಷ್ಟ್ರ ಗಡಿ ವಿವಾದ ಕೊಟ್ಟು–ತೆಗೆದುಕೊಳ್ಳುವ ನೀತಿಗೆ ಇಂದಿರಾ ಕರೆ
ನವದೆಹಲಿ, ಫೆ. 26– ಮೈಸೂರು–ಮಹಾರಾಷ್ಟ್ರ ಗಡಿ ವಿವಾದ ಮತ್ತಿತರ ಅದೇ ರೀತಿಯ ಅಂತರರಾಜ್ಯ ವಿವಾದಗಳನ್ನು ಬಗೆಹರಿಸಲು ಸಂಬಂಧಪಟ್ಟ ಎಲ್ಲ ಪಕ್ಷಗಳೂ ‘ಸಹನೆ ಹಾಗೂ ಕೊಟ್ಟು ತೆಗೆದುಕೊಳ್ಳುವ’ ಮನೋಭಾವವನ್ನು ತೋರಬೇಕೆಂದು ಪ್ರಧಾನಮಂತ್ರಿ ಶ್ರೀಮತಿ ಇಂದಿರಾಗಾಂಧಿ ಅವರು ಇಂದು ಇಲ್ಲಿ ಕರೆ ಕೊಟ್ಟರು.
ಆದರೆ ಸರ್ಕಾರವು ಯಾವುದೇ ಒತ್ತಾಯಕ್ಕೆ ಮಣಿದು ಆತುರದ ನಿರ್ಧಾರ ಕೈಗೊಳ್ಳುವುದಿಲ್ಲವೆಂದು ಅವರು ಘೋಷಿಸಿದರು.
ಅತಿನಿದ್ರೆ – ಅಪಾಯ
ನವದೆಹಲಿ, ಫೆ. 26– ಹೃದಯಸ್ತಂಭನ, ಹೃದಯಾಘಾತಗಳಿಗೆ ರಾತ್ರಿಯಲ್ಲಿ ನಿದ್ದೆ ಮಾಡುವ ಅವಧಿಯೂ ಕಾರಣವಾಗಬಹುದು. ಹತ್ತು ಗಂಟೆಗಳ ಕಾಲ ಅಥವಾ ಅದಕ್ಕಿಂತ ಹೆಚ್ಚು ಹೊತ್ತು ರಾತ್ರಿ ನಿದ್ದೆ ಮಾಡುವ ಜನರಿಗೆ ಹೃದ್ರೋಗ ಬರುವ ಸಂಭವ ಹೆಚ್ಚು. ಏಳು ಗಂಟೆ ಕಾಲ ನಿದ್ದೆ ಮಾಡುವವರಿಗೆ ಇದರ ಸಂಭವ ಕಡಿಮೆ.
ಅಮೆರಿಕದ ಕ್ಯಾನ್ಸರ್ ಸೊಸೈಟಿ 8 ಲಕ್ಷ ಸ್ತ್ರೀ ಪುರುಷರ ಬಗ್ಗೆ ನಡೆಸಿರುವ ಅಧ್ಯಯನ ಈ ಅಂಶವನ್ನು ಹೊರಗೆಡಹಿದೆ.
‘ವಿಪರೀತ ನಿದ್ರೆ ಹೃದ್ರೋಗದ ಸೂಚನೆಯೋ ಅಥವಾ ಹೃದ್ರೋಗಕ್ಕೆ ಕಾರಣವೋ ತಿಳಿಯದು’ ಎನ್ನುತ್ತಾರೆ ಸೊಸೈಟಿಯ ವೈದ್ಯ ಕ್ಯುಲೆರ್ ಹ್ಯಾಮಂಡ್. ‘ಪತಿರಾಯರನ್ನು ಶನಿವಾರ ಬೆಳಿಗ್ಗೆ ಎಬ್ಬಿಸಿ ಗಾಲ್ಫ್ ಆಡಲು ಕಳುಹಿಸುವುದು
ಒಳ್ಳೆಯದು’ ಎಂದು ಮಡದಿಯರಿಗೆ ಸಲಹೆ ಮಾಡಿದ್ದಾರೆ.
ಕಾಂಗ್ರೆಸಿಗೆ ಸುಭಾಷ್ ನಗರ ನಿವೇಶನ ಸರ್ಕಾರದ ನಿರ್ಧಾರ ಬದಲಿಸಲು ವಿರೋಧ ಪಕ್ಷದ ಬಿಗಿಪಟ್ಟು
ಬೆಂಗಳೂರು, ಫೆ. 26– ಶಾಶ್ವತ ವಸ್ತು ಪ್ರದರ್ಶನದ ಏರ್ಪಾಟಿಗಾಗಿ, ಬೆಂಗಳೂರಿನ ಸುಭಾಷ್ನಗರದ 12 ಎಕರೆ ನಿವೇಶನವನ್ನು ಕಾಂಗ್ರೆಸ್ ಪಕ್ಷಕ್ಕೆ ಗುತ್ತಿಗೆಗೆ ಕೊಡುವ ಸರ್ಕಾರದ ತೀರ್ಮಾನವನ್ನು ಬದಲಾಯಿಸಲು ವಿರೋಧ ಪಕ್ಷ, ಇಂದು ವಿಧಾನ ಸಭೆಯಲ್ಲಿ ಐದು ಗಂಟೆಗಳ ಕಾಲ, ನಿಮಿಷ ನಿಮಿಷಕ್ಕೂ ನಡೆಸಿದ ಹೋರಾಟ ಹಲವು ದೃಷ್ಟಿಗಳಿಂದ ಅಪೂರ್ವ ಸ್ವರೂಪದ್ದಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.