ADVERTISEMENT

ಗಲಭೆಯಿಂದ ಹುಬ್ಬಳ್ಳಿ ತಲ್ಲಣ; ಗುಂಡಿಗೆ ಇಬ್ಬರು ಆಹುತಿ

ವಾರ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2019, 17:36 IST
Last Updated 8 ಮಾರ್ಚ್ 2019, 17:36 IST

ಗಲಭೆಯಿಂದ ಹುಬ್ಬಳ್ಳಿ ತಲ್ಲಣ; ಗುಂಡಿಗೆ ಇಬ್ಬರು ಆಹುತಿ

ಹುಬ್ಬಳ್ಳಿ, ಮಾ. 8– ಇಂದು ಇಡೀ ಹುಬ್ಬಳ್ಳಿ ನಗರವನ್ನು ತಲ್ಲಣಗೊಳಿಸಿದ ಮತೀಯ ಗಲಭೆಗಳಲ್ಲಿ ಪೊಲೀಸರು ಗುಂಡು ಹಾರಿಸಿದ ನಿಮಿತ್ತ ಇಬ್ಬರು ಸತ್ತು ನೂರಾರು ಮಂದಿ ಗಾಯಗೊಂಡರು.

ಉದ್ರಿಕ್ತ ಗುಂಪನ್ನು ಚದುರಿಸಲು ಅನೇಕ ಬಾರಿ ಅಶ್ರುವಾಯು ಪ್ರಯೋಗ ಮಾಡಲಾಯಿತು.

ADVERTISEMENT

ನಗರದ ಬೇರೆ ಬೇರೆ ಭಾಗಗಳಲ್ಲಿ ಪದೇ ಪದೇ ಸಿಡಿದ ಘರ್ಷಣೆಗಳನ್ನು ಹತೋಟಿಗೊಳಿಸಲು ಪೊಲೀಸರು ತುಂಬಾ ಸೆಣಸಬೇಕಾಯಿತು.

ಹೋಳಿ ಹಬ್ಬದ ಸಂಬಂಧದಲ್ಲಿ ಕಾಮದೇವರ ಮೆರವಣಿಗೆ ಮಾಡಲು ಒಂದು ಕೋಮಿನ ಜನರು ಅಡ್ಡಿಪಡಿಸಿದಾಗ ಗಲಭೆ ಆರಂಭವಾಗಲು ಕಾರಣವಾಯಿತೆಂದು ಹೇಳಲಾಗಿದೆ.

ಇಂಡೊನೀಸಿಯಾದಲ್ಲಿ ಭೂಕಂಪ: 600 ಜನ ನೀರುಪಾಲು

ಜಕಾರ್ತಾ, ಮಾ. 8– ಇಂಡೊನೀಸಿಯಾದ ಸೆಲೆಬೆಸ್ ದ್ವೀಪದ ‍ಪಶ್ಚಿಮ ಕರಾವಳಿಯ ನಗರಗಳಲ್ಲಿ ಎರಡು ವಾರಗಳ ಹಿಂದೆ ಭೂಕಂಪದಿಂದ ಭಾರಿ ಉಬ್ಬರ ವಿಳಿತಗಳು ತಲೆದೋರಿ ಸುಮಾರು 600 ಜನ ನಾಪತ್ತೆಯಾಗಿದ್ದಾರೆಂದು ಇಂಡೊನೀಸಿಯಾದ ‘ಅಂತಾರಾ’ ವಾರ್ತಾ ಸಂಸ್ಥೆ ಇಂದು ವರದಿ ಮಾಡಿದೆ.

ನಾಪತ್ತೆಯಾಗಿರುವವರನೇಕರು ಕೊಚ್ಚಿ ಹೋಗಿರಬಹುದೆಂದು ಸಂತ್ರಸ್ತ ನಗರಗಳಲ್ಲಿ ಪರಿಹಾರ ಕಾರ್ಯದಲ್ಲಿ ನಿರತರಾಗಿರುವ ತಂಡಗಳು ಸುದ್ದಿ ಕಳುಹಿಸಿವೆ.

ಕರ್ಫ್ಯೂ ಜಾರಿ

ಹುಬ್ಬಳ್ಳಿ, ಮಾ. 8– ಗಲಭೆ ಕಾರಣ ಹುಬ್ಬಳ್ಳಿ ನಗರದಲ್ಲಿ ಈ ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೆ ಕರ್ಫ್ಯೂ ಜಾರಿ ಮಾಡಲಾಗಿದೆ.

ನೂರಕ್ಕೂ ಹೆಚ್ಚು ಮಂದಿ ಬಂಧನ

ಹುಬ್ಬಳ್ಳಿ, ಮಾ. 8– ಇಂದಿನ ಗಲಭೆಗಳಲ್ಲಿ ಪೊಲೀಸರು ನೂರಕ್ಕೂ ಹೆಚ್ಚು ಮಂದಿ ಸಮಾಜಘಾತುಕರನ್ನು ದಸ್ತಗಿರಿ ಮಾಡಿದ್ದಾರೆಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.