ಮಹಾರಾಷ್ಟ್ರ–ಮೈಸೂರು ಗಡಿ ವಿವಾದ: ಕೇಂದ್ರದ ನಿರ್ಧಾರವಿಲ್ಲ
ನವದೆಹಲಿ, ನ. 26– ಮೈಸೂರು–ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ಕೇಂದ್ರ ಸರ್ಕಾರವು ಯಾವೊಂದು ನಿರ್ಧಾರವನ್ನೂ ಕೈಗೊಂಡಿಲ್ಲವೆಂದು ಗೃಹಖಾತೆ ಸ್ಟೇಟ್ ಸಚಿವ ಶ್ರೀ ವಿದ್ಯಾಚರಣ ಶುಕ್ಲ ಅವರು ರಾಜ್ಯಸಭೆಯಲ್ಲಿ ಇಂದು ತಿಳಿಸಿದರು.
ಮೈಸೂರಿಗೆ ಪ್ರತಿಕೂಲವಾಗಿರುವುದೆಂದು ವರದಿಯಾದ ಕೇಂದ್ರದ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಗೃಹ ಸಚಿವರಲ್ಲಿ ಮನವಿ ಮಾಡಿಕೊಳ್ಳಲು ಮೈಸೂರಿನ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ನವೆಂಬರ್ 5ರಂದು ದೆಹಲಿಗೆ ಆಗಮಿಸಿದ್ದರೇ ಎಂಬ ಶ್ರೀ ಕೆ. ಸುಂದರಂ ಅವರ ಪ್ರಶ್ನೆಯೊಂದಕ್ಕೆ ಶುಕ್ಲ ಉತ್ತರ ಕೊಡುತ್ತ, ಮೈಸೂರಿನ ಮುಖ್ಯಮಂತ್ರಿ ಅವರು ನವೆಂಬರ್ 5ರಂದು ಗೃಹ ಸಚಿವರನ್ನು ಭೇಟಿಯಾಗಿದ್ದರೆಂದೂ ಆದರೆ ಅವರು ಗಡಿ ಪ್ರಶ್ನೆಯನ್ನು ಪ್ರಸ್ತಾಪಿಸಲಿಲ್ಲವೆಂದೂ ತಿಳಿಸಿದರು.
ನಿಜವಾದ ಕಾಂಗ್ರೆಸ್ ಬಗ್ಗೆ ಇಷ್ಟರಲ್ಲೇ ಜನತೆ ನಿರ್ಧಾರ: ಕಾಮರಾಜ್
ಮದರಾಸ್, ನ. 26– ನಿಜವಾದ ಕಾಂಗ್ರೆಸ್ ಯಾವುದೆಂಬುದನ್ನು ನಿರ್ಧರಿಸಲು ಇಷ್ಟರಲ್ಲೇ ಜನತೆಗೆ ಅವಕಾಶ ದೊರಕುವುದೆಂಬ ನಂಬಿಕೆಯನ್ನು ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಕೆ. ಕಾಮರಾಜ್ ಅವರು ಇಂದು ಇಲ್ಲಿ ವ್ಯಕ್ತಪಡಿಸಿದರು.
ಶ್ರೀ ಕಾಮರಾಜರು ದೆಹಲಿಯಿಂದ ಆಗಮಿಸಿದ ಕೂಡಲೇ ತಮ್ಮ ನಿವಾಸದಲ್ಲಿ ಪತ್ರಕರ್ತರೊಡನೆ ಮಾತನಾಡುತ್ತಾ, ಈ ವಿಷಯವನ್ನು ಅಂತಿಮವಾಗಿ ಜನತೆ ನಿರ್ಧರಿಸಬೇಕಾಗಿದೆಯೆಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.