ಆರು ಅಂಶಗಳ ಸೂತ್ರಕ್ಕೆ ಪ್ರತ್ಯೇಕತಾವಾದಿ ಆಂಧ್ರ ಕಾಂಗ್ರೆಸ್ ಕ್ರಿಯಾಸಮಿತಿ ಸರ್ವಾನುಮತದ ಒಪ್ಪಿಗೆ
ಹೈದರಾಬಾದ್, ಅ. 1– ಪ್ರತ್ಯೇಕತಾವಾದಿ ಆಂಧ್ರ ಕಾಂಗ್ರೆಸ್ ಕ್ರಿಯಾಸಮಿತಿಯು ಇಂದು ಐದೂವರೆ ಗಂಟೆಗಳ ಸುಧೀರ್ಘ ಚರ್ಚೆಯ ನಂತರ, ಆಂಧ್ರ ಸಮಸ್ಯೆಗೆ ಕೇಂದ್ರ ನೀಡಿರುವ ಆರು ಅಂಶಗಳ ಸೂತ್ರಕ್ಕೆ ಸರ್ವಾನುಮತದ ಅಂಗೀಕಾರ ನೀಡಿದೆ.
ಆಂಧ್ರ ಕಾಂಗ್ರೆಸ್ ಕ್ರಿಯಾ ಸಮಿತಿ ಹಾಗೂ ಮಾಜಿ ಉಪಮುಖ್ಯಮಂತ್ರಿ ಬಿ.ವಿ.ಸುಬ್ಬಾರೆಡ್ಡಿಯವರು ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ 70 ಮಂದಿ ವಿಧಾನಸಭಾ ಸದಸ್ಯರೂ 20 ಮಂದಿ ವಿಧಾನಪರಿಷತ್ತಿನ ಸದಸ್ಯರೂ 7 ಮಂದಿ ಸಂಸತ್ ಸದಸ್ಯರೂ ಜಿಲ್ಲಾ ಪರಿಷತ್ತಿನ ಒಬ್ಬ ಅಧ್ಯಕ್ಷರೂ 65 ಮಂದಿ ಪಂಚಾಯಿತಿ ಸದಸ್ಯರೂ ಹಾಜರಿದ್ದರು.
ನಿರ್ಣಯವನ್ನು ಆಂಧ್ರ ಕಾಂಗ್ರೆಸ್ ಕ್ರಿಯಾಸಮಿತಿ ಪ್ರಧಾನ ಕಾರ್ಯದರ್ಶಿ ವಿ. ಕೃಷ್ಣಮೂರ್ತಿಯವರು ಮಂಡಿಸಿದರು.
ನಿರ್ಣಯವನ್ನು ಹರ್ಷೋದ್ಗಾರಗಳ ನಡುವೆ ಅಂಗೀಕರಿಸಲಾಯಿತು.
ಉನ್ನತ ಶಿಕ್ಷಣದ ಸುಧಾರಣೆಗಾಗಿ ಕಾಲೇಜುಗಳಿಗೆ ಸ್ವಾಯತ್ತತೆ: ವಿಶ್ವವಿದ್ಯಾನಿಲಯಗಳಿಗೆ ಯುಜಿಸಿ ಶಿಫಾರಸು
ನವದೆಹಲಿ, ಅ. 1– ಉನ್ನತ ಶಿಕ್ಷಣದ ಸುಧಾರಣೆಯತ್ತ ಮಹತ್ವದ ಕ್ರಮವಾಗಿ ವಿಶ್ವವಿದ್ಯಾನಿಲಯಗಳು ತಮ್ಮ ಅಧೀನದಲ್ಲಿನ ಕಾಲೇಜುಗಳಿಗೆ ಸ್ವಾಯತ್ತತೆ ನೀಡುವ ತತ್ವವನ್ನು ಅನುಷ್ಠಾನಕ್ಕೆ ತರಬೇಕೆಂದು ವಿಶ್ವವಿದ್ಯಾನಿಲಯಗಳ ಧನ ವಿನಿಯೋಗ ಆಯೋಗವು ಶಿಫಾರಸು ಮಾಡಿದೆ.
ವಿಶ್ವವಿದ್ಯಾನಿಲಯಗಳಲ್ಲಿ ಈಗಿರತಕ್ಕ ಅತಿಕಟ್ಟುನಿಟ್ಟಿನ ವ್ಯವಸ್ಥೆ ಸುಧಾರಣೆ ಪ್ರಯತ್ನಗಳಿಗೆ ಅಡ್ಡಿಯಾಗಿದೆಯೆಂದೂ ಆಯೋಗವು ತಿಳಿಸಿದೆ.
ವಿಶ್ವವಿದ್ಯಾನಿಲಯ ಹಾಗೂ ಸ್ವಾಯತ್ತತೆ ಪಡೆದ ಕಾಲೇಜು ನಡುವೆ ವಿನಿಮಯ –ಸಂಪರ್ಕದ ಸಂಬಂಧಕ್ಕೆ ಅವಕಾಶ ಮಾಡಿಕೊಡುವ ನಿರ್ದೇಶನ ಸೂತ್ರವೊಂದನ್ನು ಯುಜಿಸಿ ವಿಶ್ವವಿದ್ಯಾನಿಲಯಗಳಿಗೆ ಕಳಿಸಿಕೊಟ್ಟಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.