ಕೋಮು ಭಾವನೆ ಕೆರಳಿಸುವ ಅಭ್ಯರ್ಥಿಗೆ: ಆರು ವರ್ಷಗಳ ಅನರ್ಹತೆ
ನವದೆಹಲಿ, ಅ. 6– ಚುನಾವಣೆ ಕಾಲದಲ್ಲಿ ಹುಟ್ಟಿದ ಊರು, ವಾಸಸ್ಥಳ ಮೊದಲಾದ ನೆಪಗಳನ್ನು ಮುಂದು ಮಾಡಿ ಕೋಮು ಭಾವನೆ ಕೆರಳಿಸುವುದನ್ನು ಭ್ರಷ್ಟಾಚಾರ ಎಂದು ಪರಿಗಣಿಸಲಾಗುವುದು. ಇಂಥ ಅಭ್ಯರ್ಥಿಗಳು ಆರು ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಾಗುತ್ತಾರೆ.
ಇವು ಜನತಾ ಪ್ರತಿನಿಧಿ ಶಾಸನಕ್ಕೆ ಸೂಚಿಸಲಾಗಿರುವ ತಿದ್ದುಪಡಿಯ ಪ್ರಮುಖ ಅಂಶಗಳು. ನವೆಂಬರ್ 12ರಿಂದ ಆರಂಭವಾಗಲಿರುವ ಚಳಿಗಾಲ ಅಧಿವೇಶನದಲ್ಲಿ ಸಂಸತ್ ಮುಂದೆ ಈ ತಿದ್ದುಪಡಿ ಶಾಸನವನ್ನು ಮಂಡಿಸಲಾಗುವುದು.
ಸಂಸತ್ತಿನ ಸಂಯುಕ್ತ ಪರಿಶೀಲಕ ಸಮಿತಿ ಮಾಡಿರುವ ಶಿಫಾರಸುಗಳಿಗೆ ಅನುಗುಣವಾಗಿ ರಚಿಸಲಾಗಿರುವ ಈ ತಿದ್ದುಪಡಿ ಮಸೂದೆಗೆ ಕೇಂದ್ರ ಸಂಪುಟ ಗುರುವಾರ ಒಪ್ಪಿಗೆ ನೀಡಿತು. ಈವರೆಗೆ ಕೋಮು ಭಾವನೆ ಪ್ರಚೋದಿಸುವಂಥ ಬರಹಗಳನ್ನು ಬರೆದವರು ಅಥವಾ ಕೋಮು ಪ್ರಚಾರ ನಡೆಸುವವರು ಮಾತ್ರ ಜನತಾ ಪ್ರತಿನಿಧಿ ಶಾಸನದನ್ವಯ ಅನರ್ಹರಾಗುತ್ತಿದ್ದರು.
ಲಂಚಕೋರ ಸಚಿವರ ಮೇಲೆ ಸಿನಿಮಾ ಸಾಧ್ಯವೇ?
ಮುಂಬಯಿ, ಅ. 6– ಚಿತ್ರರಂಗದ ಪ್ರಖ್ಯಾತ ನಿರ್ಮಾಪಕರು, ನಟರು ಮತ್ತು ಪತ್ರಕರ್ತರು ಸೆನ್ಸಾರ್ ಬೋರ್ಡನ್ನು ಶುಕ್ರವಾರ ತರಾಟೆಗೆ ತೆಗೆದುಕೊಂಡರು.
‘ಭ್ರಷ್ಟಾಚಾರ ಸಚಿವರೊಬ್ಬರ ಮೇಲೆ ನಾನು ಚಿತ್ರ ತೆಗೆಯಬಹುದೇ’ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಚಿತ್ರ ನಿರ್ಮಾಪಕ ರಾಜ್ ಬೋಸ್ಲಾ, ಈ ರೀತಿ ಪ್ರಶ್ನಿಸಿದಾಗ ಜನ ಉತ್ಸಾಹದಿಂದ ಚಪ್ಪಾಳೆ ತಟ್ಟಿದರು. ಚಪ್ಪಾಳೆ ಧ್ವನಿ ಅಡಗುತ್ತಿದ್ದಂತೆ ರಾಜ್ ಬೋಸ್ಲಾ ಹೇಳಿದರು, ‘ಅದು ಸಾಧ್ಯವಿಲ್ಲ. ಕಾರಣವೇನೆಂದರೆ, ಭ್ರಷ್ಟಾಚಾರ ಸಚಿವರು ಇರುವರೆಂದು ಸೆನ್ಸಾರಿನವರು ಒಪ್ಪಿಕೊಳ್ಳುತ್ತಾರೆ. ಆದರೆ, ಅವರನ್ನು ತೆರೆಯ ಮೇಲೆ ತೋರಿಸಲು ಅವಕಾಶ ಕೊಡುವುದಿಲ್ಲ’ ಎಂದರು.
‘ಹಿಂಸಾಚಾರವನ್ನು, ಲೈಂಗಿಕತೆಯನ್ನು ಚಿತ್ರಗಳಲ್ಲಿ ತೋರಿಸಬೇಡಿ ಎಂದು ಸೆನ್ಸಾರಿನವರು ಹೇಳುತ್ತಾರೆ. ಹರಿಜನರ ಸಜೀವ ದಹನ ಪ್ರಸಂಗಗಳು ನಡೆಯುತ್ತಿವೆ. ಆದರೆ, ಹರಿಜನರ ದಹನ ಪ್ರಸಂಗಗಳ ಕುರಿತು ಚಿತ್ರ ತೆಗೆಯಲು ಅವಕಾಶ ನೀಡುವುದಿಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.