ಕನ್ನಡ ಭಾಷೆಗೆ ತಕ್ಕಸ್ಥಾನ ದೊರೆಯಲೇಬೇಕು: ಮಾಸ್ತಿ
ಮಂಗಳೂರು, ಫೆ. 9– ಕನ್ನಡ ದೇಶದಲ್ಲಿ ಕನ್ನಡ ಭಾಷೆಗೆ ಇಂದು ಯಾವ ಸ್ಥಾನ ಬೇಕು? ಇಂಗ್ಲೆಂಡಿನಲ್ಲಿ ಇಂಗ್ಲಿಷಿಗೆ, ಫ್ರಾನ್ಸಿನಲ್ಲಿ ಫ್ರೆಂಚಿಗೆ, ಜರ್ಮನಿಯಲ್ಲಿ ಜರ್ಮನ್ ಭಾಷೆಗೆ ಇರುವ ಸ್ಥಾನ. ಇದು ಕನ್ನಡದ ಹಿರಿಯಣ್ಣ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಖಚಿತ ಉತ್ತರ.
‘ಹಿಂದಿ ನಮ್ಮ ರಾಷ್ಟ್ರಭಾಷೆ ಅಂದರೆ ನಾನು ಒಪ್ಪುವುದಿಲ್ಲ. ನಮ್ಮ ರಾಷ್ಟ್ರಭಾಷೆ ಆಯಾ ಪ್ರಾಂತದ್ದೇ ಆಗಬೇಕು. ನಾವು ಎಲ್ಲಾ ಭಾಷೆಗಳನ್ನು ಕಲಿಯೋಣ. ಇತರರೂ ಕಲಿಯುವ ಹಾಗೆ ಮಾಡೋಣ. ಕನ್ನಡಕ್ಕೆ ಇಂದು ಮಾನ್ಯತೆ ಬೇಕು. ಕನ್ನಡ ಭಾಷೆಯನ್ನು ಎಲ್ಲರೂ ಗುರುತಿಸಬೇಕು. ನಾವು ಕನ್ನಡದಲ್ಲಿ ಅರ್ಜಿ ಕೊಟ್ಟರೆ ಕೇಂದ್ರ ಸರ್ಕಾರ ಅದನ್ನು ಸ್ವೀಕರಿಸಬೇಕು. ಕನ್ನಡದಲ್ಲೇ ಉತ್ತರ ಕೊಡ ಬೇಕು. ಇದನ್ನು ಜನ ಕೇಳುವ ಕಾಲ ಬರಬೇಕು’ ಎಂದು ಡಾ. ಮಾಸ್ತಿ ಇಂದು ಇಲ್ಲಿನ ‘ಪಂಜೆ ಮಂಟಪ’ದಲ್ಲಿ ಪಂಜೆ ಶತಮಾನೋ
ತ್ಸವ ಉದ್ಘಾಟಿಸುತ್ತಾ ಕರೆಯಿತ್ತರು. ಡಾ. ಕೆ. ಶಿವರಾಮ ಕಾರಂತರು ಅಧ್ಯಕ್ಷತೆ ವಹಿಸಿದ್ದರು.
ಪಂಜೆಯವರ ಸಮಗ್ರ ಕೃತಿಗಳ ಸಂಪುಟವನ್ನು ಮಾರಾಟಕ್ಕೆ ಬಿಡುಗಡೆ ಗೊಳಿಸಿದ ವಿ.ಸೀ. ಅವರು ಪಂಜೆ ಮಂಗೇಶರಾಯರು ಕನ್ನಡಕ್ಕೆ ಕೊಟ್ಟಿದ್ದು ಕೆನೆಹಾಲು. ಅವರನ್ನು ‘ಕಚ್ಚಿದರೆ ಕಬ್ಬು–ಹಿಂಡಿದರೆ ಜೇನು’ ಎಂದು ಕವಿಗಳು ವರ್ಣಿ
ಸಿದುದರಲ್ಲಿ ಏನೂ ಉತ್ಪ್ರೇಕ್ಷೆ ಇಲ್ಲ’ ಎಂದರು.
ಗುಜರಾತ್ನಲ್ಲಿ ರಾಷ್ಟ್ರಪತಿ ಆಡಳಿತ
ಅಹಮದಾಬಾದ್, ಫೆ. 9– ಬೆಲೆ ಏರಿಕೆ ವಿರುದ್ಧ ಒಂದು ತಿಂಗಳ ಕಾಲ ರಾಜ್ಯದಾದ್ಯಂತ ನಡೆದ ಚಳವಳಿಯಿಂದ ತಲ್ಲಣಗೊಂಡ ಮುಖ್ಯಮಂತ್ರಿ ಚಿಮನ್ಭಾಯಿ ಪಟೇಲ್ ಅವರ ಸಂಪುಟ ರಾಜೀನಾಮೆ ನೀಡಿದ ನಂತರ, ಇಂದಿನಿಂದ ಗುಜರಾತ್ನಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ತರಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.