ಸಂಸ್ಥಾ ಕಾಂಗ್ರೆಸ್ ಕಾರ್ಯಸಮಿತಿಗೆ ನೀಲಂ ರಾಜೀನಾಮೆ: ಪಕ್ಷದ ಕೆಲಸದಿಂದ ಪೂರಾ ದೂರ
ಹೈದರಾಬಾದ್, ಮೇ 25– ‘ಸಂಕುಚಿತ ಪಕ್ಷ ದೃಷ್ಟಿಯಿಂದ ಸ್ವತಂತ್ರವಾಗಿರಲು’ ಬಯಸಿರುವ ಹಿರಿಯ ಕಾಂಗ್ರೆಸ್ ನಾಯಕರೂ ಭಾರತ ರಾಷ್ಟ್ರೀಯಕಾಂಗ್ರೆಸ್ ಎರಡಾಗಿ ಒಡೆಯಲು ಕಾರಣವಾದ ಕಳೆದ ರಾಷ್ಟ್ರಪತಿ ಚುನಾವಣೆಯಲ್ಲಿ ಅಧಿಕೃತ ಕಾಂಗ್ರೆಸ್ ಸ್ಪರ್ಧಿಯೂ ಆಗಿದ್ದ ನೀಲಂ ಸಂಜೀವರೆಡ್ಡಿ ಅವರು ಸಂಸ್ಥಾ ಕಾಂಗ್ರೆಸ್ನಿಂದ ದೂರ ಸರಿದಿದ್ದಾರೆ.
ಸಂಸ್ಥಾ ಕಾಂಗ್ರೆಸ್ಸಿನ ಕಾರ್ಯಕಾರಿ ಸಮಿತಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದಾಗಿ ಅವರು ಇಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.
ಸಂಸ್ಥಾ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದೀರಾ ಎಂದು ಪತ್ರಕರ್ತರು ಪ್ರಶ್ನಿಸಿದ್ದಕ್ಕೆ, ‘ಅದರರ್ಥ ಏನೇ ಇರಲಿ, ನಾನು ಸಂಪೂರ್ಣ ಸ್ವಾತಂತ್ರ್ಯ ಹೊಂದಿರಬೇಕೆಂಬುದು ನನ್ನ ಇಚ್ಛೆ’ ಎಂದರು.
ಸಚಿವರಿಗೆ ಹಿಂದಿ ನಾಮಕರಣ: ವಿವಾದಕ್ಕೆ ತೃಪ್ತಿಕರ ಪರಿಹಾರ– ಪ್ರಧಾನಮಂತ್ರಿ ಭರವಸೆ
ನವದೆಹಲಿ, ಮೇ 25– ಕೇಂದ್ರ ಸಚಿವರು ಮತ್ತು ಸಚಿವ ಶಾಖೆಗಳಿಗೆ ಹಿಂದಿ ಹೆಸರುಗಳನ್ನು ನೀಡಿರುವ ಸರ್ಕಾರದ ಆಜ್ಞೆಯಿಂದ ಉದ್ಭವಿಸಿರುವ ವಿವಾದವನ್ನು ತೃಪ್ತಿಕರವಾಗಿ ಪರಿಹರಿಸಲು ತಾವು ಪ್ರಯತ್ನಿಸುವುದಾಗಿ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಸಂಸತ್ತಿನಲ್ಲಿನ ವಿರೋಧ ಪಕ್ಷಗಳ ನಾಯಕರಿಗೆ ಆಶ್ವಾಸನೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.