ಕಂಗು, ತೆಂಗಿನ ಮರಗಳಿಗೆ ಶುಷ್ಕ ಶೀತ ಹವೆಯ ಮಾರಕ ಪ್ರಹಾರ
ಬೆಂಗಳೂರು, ಜ. 5– ಡಿಸೆಂಬರ್ ತಿಂಗಳ ಮೊದಲ ಭಾಗದಲ್ಲಿ ರಾಜ್ಯದ ಪಶ್ಚಿಮ ಹಾಗೂ ದಕ್ಷಿಣದ ಜಿಲ್ಲೆಗಳನ್ನು ನಡುಗಿಸಿಹೋದ ‘ಶುಷ್ಕ ಶೀತ ಹವೆ’ಯು ಅಲ್ಲಿನ ಸಹಸ್ರಾರು ಎಕರೆಗಳಲ್ಲಿ ಕಂಗು ಹಾಗೂ ತೆಂಗಿನ ಮರಗಳನ್ನು ಸಾಯಿಸತೊಡಗಿದೆ.
‘ಮುಖ್ಯವಾಗಿ ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ಅಡಿಕೆ ಬೆಳೆಗಾರರು ಮುಂದಿನ ಎರಡು ಮೂರು ವರ್ಷಗಳವರೆಗೆ ಅಡಿಕೆ ಬೆಳೆ ನೋಡುವಂತಿಲ್ಲ. ತೋಟಗಳನ್ನು ಉಳಿಸಿ, ಪುನರುಜ್ಜೀವನಗೊಳಿಸುವುದೇ ಅವರಿಗೆ ದೊಡ್ಡ ಸಮಸ್ಯೆಯಾಗಿದೆ’ ಎಂದು ಆ ಪ್ರದೇಶಗಳಲ್ಲಿ ತಿರುಗಾಡಿ ಬಂದ ತೋಟಗಾರಿಕೆ ಇಲಾಖೆ ಡೈರೆಕ್ಟರ್ ಡಾ. ಎಂ.ಎಚ್.ಮರಿಗೌಡರು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಗ್ರಾಮ ಪ್ರದೇಶಗಳಲ್ಲಿ ನಿರುದ್ಯೋಗ ನಿವಾರಣೆಗೆ ತೀವ್ರ ಕಾರ್ಯಕ್ರಮ
ನವದೆಹಲಿ, ಜ. 5– ಗ್ರಾಮಾಂತರ ಪ್ರದೇಶಗಳಲ್ಲಿ ನಿರುದ್ಯೋಗ ನಿವಾರಣೆಗಾಗಿ ತತ್ಕ್ಷಣವೇ 50 ಕೋಟಿ ರೂ. ವೆಚ್ಚದ ತೀವ್ರ ಕಾರ್ಯಕ್ರಮ ಕೈಗೊಳ್ಳಲು ಕೇಂದ್ರ ಸಂಪುಟ ಇಂದು ನಿರ್ಧರಿಸಿತು.
ವರ್ಷಂಪ್ರತಿ 50 ಕೋಟಿ ರೂ. ವೆಚ್ಚ ಮಾಡುವ ಈ ಕಾರ್ಯಕ್ರಮದಲ್ಲಿ ಸಾಕಷ್ಟು ಉದ್ಯೋಗವಿಲ್ಲದವರ ಸಮಸ್ಯೆಯನ್ನೂ ಬಗೆಹರಿಸಲು ಪ್ರಯತ್ನಿಸಲಾಗುವುದು. ಈ ಕಾರ್ಯಕ್ರಮದಿಂದ 4 ಲಕ್ಷ 20 ಸಾವಿರ ಮಂದಿಗೆ ಪ್ರಯೋಜನವಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.