‘ಕಾಗದದ ಚೂರು’ ಹೇಳಿಕೆಗೆ ಸಚಿವರ ವಿಷಾದ
ಬೆಂಗಳೂರು, ಜೂನ್ 8– ಕೃಷಿ ಕೈಗಾರಿಕಾ ಕಾರ್ಪೊರೇಷನ್ಗೆ ಸಂಬಂಧಿಸಿದಂತೆ ವಿಧಾನಮಂಡಲದ ಸಾರ್ವಜನಿಕ ಉದ್ಯಮ ಸಮಿತಿ ನೀಡಿದ ವರದಿ ‘ಕಾಗದದ ಚೂರು’ ಎಂಬ ನಿನ್ನೆಯ ಕೃಷಿ ಮಂತ್ರಿಗಳ ಟೀಕೆ, ಅವರನ್ನು ಇಂದು ವಿಧಾನ ಪರಿಷತ್ತಿನಲ್ಲಿ ಪಟ್ಟು ಹಿಡಿದ ವಿರೋಧ ಪಕ್ಷದವರಿಂದ ಹಕ್ಕು ಬಾಧ್ಯತೆಯ ಸೂಚನೆಯ ದಾಳಿಯನ್ನು ಎದುರಿಸುವಂತೆ ಮಾಡಿತು.
ಸೂಚನೆಯ ಅಂಗೀಕಾರ ನಿರ್ಣಯ ನಿರ್ಧಾರವನ್ನು ಮುಂದೆ ನೀಡುವುದಾಗಿ ಸಭಾಪತಿ ಶ್ರೀ ಎಸ್.ಡಿ. ಗಾಂವ್ಕರ್ ಅವರು ಹೇಳಿದರೂ, ಪ್ರಾರಂಭದ ಸುಮಾರು ಅರ್ಧಗಂಟೆಯ ಕಾರ್ಯಕಲಾಪ ಬಿಟ್ಟರೆ, ಇಡೀ ದಿನ ಬೇರೆ ಯಾವ ಕಲಾಪಕ್ಕೂ ಅವಕಾಶ ಕೊಡದಂತೆ ತಡೆಯುವುದರಲ್ಲಿ ವಿರೋಧ ಪಕ್ಷ ಯಶಸ್ವಿಯಾಯಿತು.
ದೀರ್ಘ ಗೊಂದಲದಿಂದಾಗಿ, ಒಂದು ಘಟ್ಟದಲ್ಲಿ ಸಭೆಯು ಸುಮಾರು ಎರಡೂ ಮುಕ್ಕಾಲು ಗಂಟೆಗಳ ಕಾಲ ಮುಂದಕ್ಕೆ ಹೋಗಿ, ಕೊನೆಗೆ ಐದು ನಿಮಿಷಗಳ ಕಾಲ ಸೇರಿದಾಗ, ಸಚಿವ ಶ್ರೀ ಎಚ್.ಕೆ. ಪಾಟೀಲರು, ‘ತಮ್ಮ ನಿನ್ನೆಯ ಕೆಲವು ಮಾತುಗಳಿಂದ ಸದಸ್ಯರಿಗೆ ನೋವಾಗಿದ್ದರೆ, ಅಂಥ ಮಾತುಗಳನ್ನು ವಾಪಸು ಪಡೆದುಕೊಳ್ಳುವುದಾಗಿ ವಿಷಾದ’ ಸೂಚಿಸಿದರು.
ಪ್ರಸಕ್ತ ಸಾಲಿನಿಂದ ಬಿ.ಆರ್. ಪ್ರಾಜೆಕ್ಟಿನಲ್ಲಿ ಮೈಸೂರು ವಿ.ವಿ. ಸ್ನಾತಕೋತ್ತರ ಕೇಂದ್ರ
ಶಿವಮೊಗ್ಗ, ಜೂನ್ 8– ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರವನ್ನು ಈ ಶಿಕ್ಷಣ ಸಾಲಿನಿಂದಲೇ ಇಲ್ಲಿಗೆ 18 ಮೈಲಿಗಳ ದೂರದಲ್ಲಿರುವ ಬಿ. ಆರ್. ಪ್ರಾಜೆಕ್ಟಿನಲ್ಲಿ ಆರಂಭಿಸಲಾಗುವುದೆಂದು ಆ ಪ್ರದೇಶವನ್ನು ಪರಿಶೀಲಿಸಿದ ಶಿಕ್ಷಣ ಸಚಿವ ಶ್ರೀ ಎ.ಆರ್. ಬದರಿನಾರಾಯಣ್ ಅವರು ಇಂದು ಇಲ್ಲಿ ಪತ್ರಕರ್ತರಿಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.