ADVERTISEMENT

50 ವರ್ಷಗಳ ಹಿಂದೆ: ಗುರುವಾರ 11.3.1971

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2021, 19:30 IST
Last Updated 10 ಮಾರ್ಚ್ 2021, 19:30 IST
   

ಆಡಳಿತ ಕಾಂಗ್ರೆಸ್ ಜಯಭೇರಿ ಇಂದಿರಾ ವಿಜಯ
ನವದೆಹಲಿ, ಮಾರ್ಚ್ 10–
ಲೋಕಸಭೆಗೆ ನಡೆದ ಮಧ್ಯಂತರ ಚುನಾವಣೆಗೆ ಸಂಬಂಧಿಸಿದಂತೆ ಪ್ರಕಟವಾಗಿರುವ ಪ್ರಥಮ ಫಲಿತಾಂಶವು ಆಡಳಿತ ಕಾಂಗ್ರೆಸ್ಸಿಗೆ ಗೆಲುವಿನ ಸರಮಾಲೆಯನ್ನು ತಂದುಕೊಟ್ಟಿದೆ. ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರು ರಾಯ್‌ಬರೇಲಿಯ ತಮ್ಮ ಸ್ಥಾನವನ್ನು ಒಂದು ಲಕ್ಷಕ್ಕೂ ಹೆಚ್ಚು ಮತಗಳಿಂದ ಉಳಿಸಿಕೊಂಡಿದ್ದಾರೆ. ಅರ್ಥ ಸಚಿವ ಚವಾಣ್ ಸತಾರಾದಿಂದ ಗೆದ್ದಿದ್ದಾರೆ.

ಉತ್ತರಪ್ರದೇಶ, ದೆಹಲಿ, ಮಹಾ ರಾಷ್ಟ್ರ, ಆಂಧ್ರ ಮುಂತಾದ ರಾಜ್ಯಗಳಲ್ಲಿ ಪ್ರಕಟವಾದ ಫಲಿತಾಂಶಗಳಲ್ಲಿ ಆಡಳಿತ ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸಿದೆ. ಸೂರತ್ ಕ್ಷೇತ್ರದಿಂದ ಮೊರಾರ್ಜಿ ದೇಸಾಯಿ ಅವರ ಗೆಲುವು ಸಂಸ್ಥಾ ಕಾಂಗ್ರೆಸ್ಸಿನ ಮುಖ್ಯ ವಿಜಯ. ಜನಸಂಘದ ಅಧ್ಯಕ್ಷ ವಾಜಪೇಯಿ ಗ್ವಾಲಿಯರ್‌ನಿಂದ ಗೆದ್ದಿದ್ದಾರೆ. ಜಯಪುರದಿಂದ ಮಹಾರಾಣಿ ಗಾಯತ್ರಿ ದೇವಿ ಅವರ ವಿಜಯ.

ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಆಡಳಿತ ಕಾಂಗ್ರೆಸ್ ಮುಂದು
ಬೆಂಗಳೂರು, ಮಾರ್ಚ್ 10–
ಇಂದು ಸಂಜೆ ಮತಗಳ ಎಣಿಕೆಯ ಪ್ರಥಮ ಘಟ್ಟ ಮುಗಿದಾಗ ರಾಜ್ಯದ 27 ಲೋಕಸಭಾ ಕ್ಷೇತ್ರಗಳಲ್ಲೂ ಆಡಳಿತ ಕಾಂಗ್ರೆಸ್ ಅಭ್ಯರ್ಥಿಗಳು ಮುಂದಿದ್ದಾರೆ.

ADVERTISEMENT

ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಹುಕ್ಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಣಿಕೆಯ ವಿವರ ಮಾತ್ರ ತಿಳಿದಿದ್ದು ಸಂಸ್ಥಾ ಕಾಂಗ್ರೆಸ್ಸಿನ ಶ್ರೀ ಕರಾಳೆ ಅವರಿಗಿಂತ ಆಡಳಿತ ಕಾಂಗ್ರೆಸ್ಸಿನ ಶ್ರೀ ಶಂಕರಾನಂದ್ ಅವರು 3,662 ಮತಗಳಿಂದ ಮುಂದಿದ್ದಾರೆ.

ಇಂದು ಪ್ರತೀ ಲೋಕಸಭೆ ಕ್ಷೇತ್ರದಲ್ಲೂ ಎರಡು ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯ ಎಣಿಕೆ ಮಾತ್ರ ಮುಗಿದಿದೆ. ಉಳಿದವನ್ನು ನಾಳೆ ಬೆಳಿಗ್ಗೆ 8 ಗಂಟೆಗೆ ತೆಗೆದುಕೊಳ್ಳಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.