ADVERTISEMENT

50 ವರ್ಷಗಳ ಹಿಂದೆ: ಮಂಗಳವಾರ, 28–12–1970

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2020, 19:30 IST
Last Updated 27 ಡಿಸೆಂಬರ್ 2020, 19:30 IST
   

ಸಾಹಿತ್ಯ ಗೋಷ್ಠಿ: ಜೊಳ್ಳು ಸೃಷ್ಟಿ ಬಗ್ಗೆ ವಿಮರ್ಶಕರ ಟೀಕೆ
ಬೆಂಗಳೂರು, ಡಿ. 28–
ಕನ್ನಡ ಸಾಹಿತ್ಯ ವೃಕ್ಷದ ವಿವಿಧ ಕೊಂಬೆಗಳ ಬೆಳವಣಿಗೆಯಲ್ಲಿ ಕಂಡ ಮಂಕು–ಮೆರಗಿನ ಚಿತ್ರವನ್ನು ಇಂದು ಬೆಳ್ಳಾವೆ ವೆಂಕಟನಾರಣಪ್ಪ ಮಂಟಪದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಡೆದ ಸಾಹಿತ್ಯ ಗೋಷ್ಠಿ ಬಿಚ್ಚು ಮಾತಿನಲ್ಲಿ ವಿಮರ್ಶಿಸಿತು.

ಶ್ರೀ ಕೆ.ಡಿ. ಕುರ್ತಕೋಟಿ ಅವರ ಅಧ್ಯಕ್ಷತೆಯಲ್ಲಿ ಶ್ರೀ ಎಲ್‌.ಎಸ್‌. ಶೇಷಗಿರಿ ರಾವ್‌ ಅವರ ನಿರ್ದೇಶನದಲ್ಲಿ ನಡೆದ ಈ ವಿಚಾರಶೀಲ ವಿಚಾರ ಸಂಕಿರಣದಲ್ಲಿ ಸಾಹಿತ್ಯದ ನಾನಾ ಮುಖಗಳಾದ ಕಾವ್ಯ, ನಾಟಕ, ಕಾದಂಬರಿ, ಸಣ್ಣಕತೆ, ಜನಪದ ಸಾಹಿತ್ಯ ಮತ್ತು ಸಂಶೋಧನೆಗಳ ವಿಮರ್ಶೆ ನಡೆಯಿತು.

ಕ್ಷೀರಪ್ರಾಶನದ ಜೊತೆಗೆ ಕನ್ನಡದ ಪ್ರಾಶನವೂ ಆಗಲಿ
ಬೆಂಗಳೂರು, ಡಿ. 28–
ಆಡಳಿತ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಕನ್ನಡಕ್ಕೆ ‘ಸಲ್ಲತೊಡಗಿರುವ’ ಅಗ್ರಪೂಜೆ, ಪರಭಾಷೆಗಳ ಯಾಜಮಾನ್ಯಕ್ಕೆ ಬಲಿಯಾಗದಿರಲಿ ಎಂಬ ಕಳಕಳಿ ಇಂದು ಸಾಹಿತ್ಯ ಸಮ್ಮೇಳನದ ಮಹಿಳಾ ಗೋಷ್ಠಿಯಿಂದ ಚಿಮ್ಮಿತು.

ADVERTISEMENT

‘ಸೋದರ ಭಾಷೆಗಳನ್ನು ಕಲಿಯುವುದರಲ್ಲಿ ತಪ್ಪಿಲ್ಲ. ಆದರೆ, ಅವುಗಳು ಮಿತ್ರರಂತೆ ಬರಲಿ, ಯಜಮಾನರಂತಲ್ಲ’ ಎಂದು ಗೋಷ್ಠಿಯ ಅಧ್ಯಕ್ಷೆ ಶ್ರೀಮತಿ ವಾಣಿ ಅವರು ಸಂಜೆ ಬೆಳ್ಳಾವೆ ವೆಂಕಟನಾರಣಪ್ಪ ಮಂಟಪದಿಂದ ಹೇಳಿದರು.

ಮುಖ್ಯವಾಗಿ ಇಂಗ್ಲಿಷ್‌ ಮತ್ತು ಹಿಂದಿಗಳ ‘ಯಜಮಾನ ಪ್ರವೃತ್ತಿ’ಯನ್ನು ಪ್ರಸ್ತಾಪಿಸಿದ ಶ್ರೀಮತಿ ವಾಣಿ ಅವರು, ‘ಕನ್ನಡದಲ್ಲಿ ಯಾವುದಿಲ್ಲ? ಎಲ್ಲವೂ ಇವೆ. ಆದರೆ, ಉಪಯೋಗಿಸುವ ಮನಸ್ಸು ಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.