ADVERTISEMENT

ಭಾನುವಾರ, 21–1–1968

​ಪ್ರಜಾವಾಣಿ ವಾರ್ತೆ
Published 20 ಜನವರಿ 2018, 19:30 IST
Last Updated 20 ಜನವರಿ 2018, 19:30 IST

ಕಾಶ್ಮೀರ ವಿಮೋಚನೆಗೆ ಬಲಿಷ್ಠ ಪಾಕಿಸ್ತಾನಿ ಸೈನ್ಯ ಅಗತ್ಯ: ಜ. ಮೂಸಾ

ನವದೆಹಲಿ, ಜ. 20– ಕಾಶ್ಮೀರದ ವಿಮೋಚನೆಗೆ ಪಾಕಿಸ್ತಾನದ ಮಿಲಿಟರಿ ಶಕ್ತಿಯನ್ನು ಅವಲಂಬಿಸಿರುವುದರಿಂದ ರಕ್ಷಣಾ ಪಡೆಗಳನ್ನು ಬಲಪಡಿಸುವುದೇ ಪಾಕಿಸ್ತಾನದ ಮುಖ್ಯ ಕರ್ತವ್ಯವಾಗಿದೆ ಎಂದು ಪಶ್ಚಿಮ ಪಾಕಿಸ್ತಾನದ ಗವರ್ನರ್ ಜ. ಮೂಸಾ ಅವರು ನಿನ್ನೆ ಭಾವಲ್ಪುರದಲ್ಲಿ ತಿಳಿಸಿದರು ಎಂದು ಪಾಕಿಸ್ತಾನ್ ರೇಡಿಯೋ ತಿಳಿಸಿದೆ.

ರಫ್ತು ಸಾಲ ನೀಡಲು ಸಂಸ್ಥೆ ಸ್ಥಾಪನೆ ಪರಿಶೀಲನೆ

ADVERTISEMENT

ಮದ್ರಾಸ್, ಜ. 20– ವಿಶೇಷವಾದ ರಫ್ತು ಸಾಲ ನೀಡಿಕೆ ಸಂಸ್ಥೆಯೊಂದನ್ನು ರಚಿಸುವ ಪ್ರಶ್ನೆ ಪರಿಶೀಲನೆಯಲ್ಲಿದೆ.

ರಿಸರ್ವ್ ಬ್ಯಾಂಕ್ ಡೆಪ್ಯುಟಿ ಗೌರ್ನರ್ ಶ್ರೀ ಬಿ.ಎಸ್. ಅದರ್‌ಕರ್ ಅವರು ಇಂದು ಇಲ್ಲಿ ರಫ್ತು ಅಭಿವೃದ್ಧಿ ವಿಚಾರಗೋಷ್ಠಿಯನ್ನು ಉದ್ದೇಶಿಸಿ ಭಾಷಣ ಮಾಡುತ್ತ ರಫ್ತು ಅಭಿವೃದ್ಧಿಗಾಗಿ ಹೆಚ್ಚು ಸೌಲಭ್ಯಗಳನ್ನು ಕಲ್ಪಿಸುವ ಸಂಸ್ಥೆಯೊಂದರ ಔಚಿತ್ಯವನ್ನು ‍ಪ್ರಸ್ತಾಪಿಸಿದರು.

22, 23 ರಂದು ವಿದ್ಯಾರ್ಥಿಗಳಿಂದ ಸಾಂಕೇತಿಕ ಮುಷ್ಕರ

ಬೆಂಗಳೂರು, ಜ. 20– ಭಾಷಾ ಶಾಸನದಲ್ಲಿ ಹಿಂದಿ ಪರವಾಗಿ ತೋರಿರುವ ಪಕ್ಷಪಾತವನ್ನು ವಿರೋಧಿಸಿ ಪ್ರತಿಭಟನೆ ಸೂಚಿಸಲು ಜನವರಿ 22 ಮತ್ತು 23 ರಂದು ಸಾಂಕೇತಿಕ ಮುಷ್ಕರ ನಡೆಸುವಂತೆ ಬೆಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಮಂಡಲಿಯು ವಿದ್ಯಾರ್ಥಿಗಳಿಗೆ ಕರೆ ನೀಡಿದೆ.

25ರಂದು ಭಾರತಕ್ಕೆ ಕೊಸಿಗಿನ್

ಮಾಸ್ಕೊ, ಜ. 20– ಭಾರತದ ಗಣರಾಜ್ಯೋತ್ಸವದಲ್ಲಿ ಭಾಗವಹಿಸಲು ಸೋವಿಯಟ್ ಪ್ರಧಾನ ಮಂತ್ರಿ ಕೊಸಿಗಿನ್ ಅವರು 25 ರಂದು ಭಾರತಕ್ಕೆ ಭೇಟಿ ಕೊಡುವರೆಂದು ಇಲ್ಲಿ ಪತ್ರಿಕೆಗಳು ವರದಿ ಮಾಡಿದುವು.

ಅವರು ಐದು ಅಥವಾ ಆರು ದಿನಗಳ ಕಾಲ ಭಾರತದಲ್ಲಿ ತಂಗಬಹುದೆಂದೂ ಅದೇ ಮೂಲಗಳು ತಿಳಿಸಿವೆ.

ಹಣಕಾಸು ಆಯೋಗಕ್ಕೆ ತ್ಯಾಗಿ ಅಧ್ಯಕ್ಷ

ನವದೆಹಲಿ, ಜ. 20– ಶ್ರೀ ಮಹಾವೀರ ತ್ಯಾಗಿ ಅವರ ಅಧ್ಯಕ್ಷತೆಯಲ್ಲಿ ಐದನೆಯ ಹಣಕಾಸು ಆಯೋಗವನ್ನು ರಚಿಸಲು ಕೇಂದ್ರ  ಸರ್ಕಾರ ನಿರ್ಧರಿಸಿದೆ.

ಐವರು ಸದಸ್ಯರಿರುವ ಈ ಆಯೋಗದಲ್ಲಿ ರಿಜರ್ವ್ ಬ್ಯಾಂಕಿನ ಗೌರ್ನರ್ ಶ್ರೀ ಪಿ.ಸಿ. ಭಟ್ಟಾಚಾರ್ಯ ಅವರು ಸದಸ್ಯರಾಗಿರುತ್ತಾರೆ.

ಇಡೀ ತೆರಿಗೆ ವ್ಯವಸ್ಥೆ ಬದಲಾವಣೆ

ಬೆಂಗಳೂರು, ಜ. 20– ತಾವು ಇಡೀ ತೆರಿಗೆ ಪದ್ಧತಿಯನ್ನೇ ಬದಲಾಯಿಸಲಿರುವುದಾಗಿ ಅರ್ಥಸಚಿವ ಶ್ರೀ ಮುರಾರಜಿ ದೇಸಾಯಿಯವರು ಇಂದು ಇಲ್ಲಿ ತಿಳಿಸಿದರು.

ವಾಣಿಜ್ಯೋದ್ಯಮಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅರ್ಥ ಸಚಿವರು ವಾಣಿಜ್ಯ ಸಂಸ್ಥೆ ಅಧ್ಯಕ್ಷರು ತೆರಿಗೆಗೆ ಸಂಬಂಧಿಸಿದಂತೆ ಹೇಳಿದ್ದ ಸಮಸ್ಯೆಗಳನ್ನು ಪ್ರಸ್ತಾಪಿಸಿ ‘ಇಡೀ ಪದ್ಧತಿಯನ್ನೇ ಬದಲಾಯಿಸಲಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.