ರಾಜ್ಯ ಮಂತ್ರಿಮಂಡಲದಲ್ಲಿ ಸಾಮರಸ್ಯವಿಲ್ಲವೆಂಬ ಹೇಳಿಕೆ ಬುಡವಿಲ್ಲದ್ದು: ವೀರೇಂದ್ರ ಪಾಟೀಲ್
ಗದಗ, ನ. 10– ‘ಮೈಸೂರು ಮಂತ್ರಿಮಂಡಲ ಒಗ್ಗಟ್ಟಿನಿಂದ ಮತ್ತು ಸಾಮರಸ್ಯದಿಂದ ಕೆಲಸ ಮಾಡುತ್ತಿದೆ. ಮಂತ್ರಿಮಂಡಲದ ಇತರ ಸದಸ್ಯರು ನನ್ನಲ್ಲಿ ಪೂರ್ಣ ವಿಶ್ವಾಸವಿಟ್ಟು ಕೆಲಸ ಮಾಡುತ್ತಿದ್ದಾರೆ. ಮಂತ್ರಿಮಂಡಲದಲ್ಲಿ ಸಾಮರಸ್ಯವಿಲ್ಲವೆಂಬ ಹೇಳಿಕೆ ಬುಡವಿಲ್ಲದ್ದು’ ಎಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ನಿನ್ನೆ ಇಲ್ಲಿ ಸಾರ್ವಜನಿಕ ಸಭೆಯಲ್ಲಿ ಹೇಳಿದರು.
‘ಮಂತ್ರಿಮಂಡಲದಲ್ಲಿ ಸಹಕಾರ, ಸಾಮರಸ್ಯಗಳಿಲ್ಲದಿದ್ದರೆ ಮಂತ್ರಿಮಂಡಲ ಇರುತ್ತಿರಲಿಲ್ಲ. ಈಗಿನ ಮಂತ್ರಿಗಳು ಮಂತ್ರಿಗಳಾಗಿ ಇರುತ್ತಿರಲಿಲ್ಲ’ ಎಂದು ಅವರು ಹೇಳಿದರು.
ಕನ್ನಡ ಟೈಪಿಸ್ಟರಿಗೆ ಪ್ರೋತ್ಸಾಹ
ಬೆಂಗಳೂರು, ನ. 10– ಕನ್ನಡ ಟೈಪಿಸ್ಟರಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕೆಂದು ಅಧಿಕೃತ ಭಾಷಾ ಸಮಿತಿಯು ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಕನ್ನಡ ಆಡಳಿತ ಭಾಷೆಯಾಗಬೇಕೆಂಬ ಬಗ್ಗೆ ಜನತೆಯಲ್ಲಿ ಅಪಾರ ಉತ್ಸಾಹ ಕಂಡುಬಂದರೂ ಎಲ್ಲ ಘಟ್ಟಗಳಲ್ಲಿ ಅಧಿಕಾರಿಗಳ ಒಲವು ‘ನಿರಾಶಾದಾಯಕವಾಗಿದೆ’ ಎಂದು ತಿಳಿದುಬಂದಿದೆ.
ತಾಲ್ಲೂಕು ಘಟ್ಟದಲ್ಲಿ ಕನ್ನಡವನ್ನು ಬಳಕೆಗೆ ತರುವುದರಲ್ಲಿ ಅಧಿಕಾರಿಗಳ ಕಾರ್ಯನಿರ್ವಹಣೆ ಬಗ್ಗೆ ಸಮಿತಿಗೆ ತೀರಾ ನಿರಾಶೆಯುಂಟಾಗಿದೆ. ಸಮಿತಿ ತನ್ನ ಅಂತಿಮ ವರದಿ ಸಲ್ಲಿಸುವ ಮುನ್ನ ಇಡೀ ರಾಜ್ಯದಲ್ಲಿ ಪ್ರವಾಸ ಮಾಡಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.