ADVERTISEMENT

ಸೋಮವಾರ, 16–6–1969

​ಪ್ರಜಾವಾಣಿ ವಾರ್ತೆ
Published 15 ಜೂನ್ 2019, 18:30 IST
Last Updated 15 ಜೂನ್ 2019, 18:30 IST

ಎಂ.ಪಿ.ಸಿ.ಸಿ.ಯಲ್ಲಿ ಆರೋಪ, ಉದ್ರೇಕ:ಡಾ. ನಾಗಪ್ಪ ಆಳ್ವ ಅವರ ಹೇಳಿಕೆಗೆ ಎಂ.ವಿ. ಕೃಷ್ಣಪ್ಪ, ಸಾಗರ್ ಕೋಪ

ಮೈಸೂರು, ಜೂನ್ 15– ಹಳೇ ಮೈಸೂರಿನ ಭಿನ್ನಮತೀಯ ನಾಯಕರಿಗೆ ರಾಜ್ಯದ ಈಗಿನ ಮುಖಂಡತ್ವದೊಡನೆ ಇರುವ ವಿರಸ ಇಂದು ಸಂಜೆ ಅನಿರೀಕ್ಷಿತವಾಗಿ ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿಯ ಬಹಿರಂಗ ಅಧಿವೇಶನದಲ್ಲಿ ಸ್ಫೋಟವಾದಾಗ ಹಿಂದೆಂದೂ ಕಾಣದ ಗೊಂದಲ ಪಕ್ಷದ ವೇದಿಕೆಯಲ್ಲಿ ಕಂಡು ಬಂದಿತು.

ಪ್ರದೇಶ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀ ಎಂ.ವಿ. ಕೃಷ್ಣಪ್ಪ ಮತ್ತು ಶ್ರೀ ಆರ್. ದಯಾನಂದಸಾಗರ್‌ರವರು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ. ನಾಗಪ್ಪ ಆಳ್ವರವರ ವಿರುದ್ಧ ಮಾಡಿದ ಬಹಿರಂಗ ಟೀಕೆಗಳು ಸಭೆಯನ್ನು ದಂಗು ಬಡಿಸಿತು.

ADVERTISEMENT

ಹಳೇ ಮೈಸೂರಿಗೆ ಆಗಿರುವ ಅನ್ಯಾಯಗಳ ಪರಿಶೀಲನೆಗೆ ನ್ಯಾಯಾಂಗ ಸಮಿತಿ ನೇಮಕವಾಗಬೇಕೆಂಬ ನಿರ್ಣಯ ನೆನ್ನೆ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನವಾಗಿದೆಯೆಂದು ಅಧ್ಯಕ್ಷರು ಪತ್ರಿಕೆಗಳಿಗೆ ತಿಳಿಸಿರುವುದು ಸತ್ಯಕ್ಕೆ ದೂರವಾಗಿದ್ದು ಎಂದು ನುಡಿದ ಶ್ರೀ ಎಂ.ವಿ. ಕೃಷ್ಣಪ್ಪನವರು, ‘ನಿರ್ಣಯ ನಿನ್ನೆ ತಿರಸ್ಕೃತವಾಗಿರಲಿಲ್ಲ ಮುಖ್ಯಮಂತ್ರಿಗಳ ಆಶೋತ್ತರ ಮೇರೆಗೆ ಸದ್ಯಕ್ಕೆ ಒತ್ತಾಯ ಮಾಡಿಸುವುದು ಬೇಡ ಎಂದು ಸುಮ್ಮನಿದ್ದೇವು’ ಎಂದರು.

ಆಡಳಿತದಲ್ಲಿ ವಿಳಂಬ ನಿವಾರಣೆಗೆ ಪ್ರತ್ಯೇಕ ಏರ್ಪಾಡು ಮಾಡಲು ಕರೆ

ಮೈಸೂರು, ಜೂನ್ 15– ಕಾರ್ಯಾಂಗದಲ್ಲಿ ಎದ್ದುಕಾಣುತ್ತಿರುವ ವಿಳಂಬ ಪ್ರವೃತ್ತಿಯಿಂದ ಅನ್ಯಾಯವಾಗುವ ಪ್ರಸಂಗಗಳನ್ನು ಪರಿಶೀಲಿಸಿ ಜನರಿಗೆ ಶೀಘ್ರ ನ್ಯಾಯ ಒದಗಿಸಿಕೊಡಲು ಸರ್ಕಾರ ಪ್ರತ್ಯೇಕ ಏರ್ಪಾಡು ಮಾಡಬೇಕೆಂದು ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಾ. ನಾಗಪ್ಪ ಆಳ್ವ ಅವರು ಇಲ್ಲಿ ಇಂದು ಸಲಹೆ ಮಾಡಿದರು.

ಎಲ್ಲ ನೀರಾವರಿ ಕಾಮಗಾರಿ ನಾಲ್ಕನೆ ಯೋಜನೆಯಲ್ಲೇ ಮುಗಿಸಲು ನಿರ್ಧಾರ

ಮೈಸೂರು, ಜೂನ್ 15– ‘ಕಾವೇರಿ ಮತ್ತು ಕೃಷ್ಣಾ ನದಿಯಿಂದ ರಾಜ್ಯಕ್ಕೆ ಬರಲಿರುವ ನೀರು ಕೈತಪ್ಪಿ ಹೋಗದಂತೆ 4ನೇ ಯೋಜನೆ ಅವಧಿಯಲ್ಲಿ ಎಲ್ಲಯೋಜನೆಗಳನ್ನು ಮುಗಿಸಲಾಗುವುದು’ ಎಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.