ದಿವ್ಯಾಲಂಕೃತ ಭಾರತಮಾತೆಯ ವೈಭವಪೂರ್ಣ ದಸರಾ ಮೆರವಣಿಗೆ
ಮೈಸೂರು, ಸೆ. 29– ರಾಜ– ಮಹರಾಜರ ಆಳ್ವಿಕೆಯ ಗುಂಗಿನಲ್ಲೇ ಇನ್ನೂ ಇದ್ದ ಮೈಸೂರು ನಗರದ ಇತಿಹಾಸದಲ್ಲಿ ಇಂದು ಒಂದು ಹೊಸ ಅಧ್ಯಾಯ ಪ್ರಾರಂಭವಾಯಿತು.
ಶುದ್ಧ ಪ್ರಜಾಸತ್ತೆಗೆ ಅನುಗುಣವಾಗಿ ಆನೆ ಮೇಲೇರಿ ವಿಜೃಂಭಿಸುತ್ತ ಮೊದಲ ಬಾರಿಗೆ ಬಂದ ಭಾರತ ಮಾತೆ ಮೆರವಣಿಗೆ ಯನ್ನು ಐದೂವರೆ ಕಿಲೋಮೀಟರ್ ಉದ್ದಕ್ಕೂ ಕಿಕ್ಕಿರಿದು ಕೂಡಿದ್ದ ಸುಮಾರು ಆರು ಲಕ್ಷ ಮಂದಿ ಪ್ರಥಮ ‘ಜನತಾ ದಸರಾ’ ಉತ್ಸವವನ್ನು ಸಾರಿದರು.
ಇಷ್ಟು ವರ್ಷವೂ ಮಹಾರಾಜರ ಜಂಬೂ ಸವಾರಿಯನ್ನೇ ನೋಡಿ ನೋಡಿ ಅಭ್ಯಾಸವಾಗಿದ್ದ ಮೈಸೂರು ಜನತೆಗೆ ಇದೊಂದು ಹೊಸ ಅನುಭವ.
ಇಂದು ನರಸಿಂಹ ರಾವ್ ಸಂಪುಟದ ಪ್ರಮಾಣವಚನ
ಹೈದರಾಬಾದ್, ಸೆ. 29– ಆಡಳಿತ ಕಾಂಗ್ರೆಸ್ ನಾಯಕ ಪಾಮುಲಪರ್ತಿ ವೆಂಕಟ ನರಸಿಂಹ ರಾವ್ ಅವರು ಮುಖ್ಯಮಂತ್ರಿಯಾಗಿರುವ ಆಂಧ್ರಪ್ರದೇಶದ 14 ಮಂದಿಯ ನೂತನ ಮಂತ್ರಿ ಮಂಡಲ ಗುರುವಾರ ಬೆಳಿಗ್ಗೆ 9.45ಕ್ಕೆ ಪ್ರಮಾಣವಚನ ಸ್ವೀಕರಿಸುವುದು.
ಆಂಧ್ರಪ್ರದೇಶ ವಿಧಾನಸಭೆ ಅಧ್ಯಕ್ಷ ಬಿ.ವಿ.ಸುಬ್ಬಾರೆಡ್ಡಿಯವರು ಹೊಸ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾಗಿರುವರು.
ಕೇಂದ್ರ ನಾಯಕರ ಜೊತೆ ಸಮಾಲೋ ಚನೆ ನಡೆಸಿದ ನಂತರ ಮಂಗಳವಾರ ಇಲ್ಲಿಗೆ ವಾಪಸಾದ ನರಸಿಂಹ ರಾವ್ ಅವರು ರಾಜಭವನಕ್ಕೆ ತೆರಳಿ ರಾಜ್ಯಪಾಲ ಖಂಡೂಭಾಯಿ ದೇಸಾಯಿ ಅವರ ಜೊತೆ ಸಚಿವರ ನೇಮಕ ಕುರಿತು ಮಾತುಕತೆ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.