ವಿಜಯವಾಡದಲ್ಲಿ ಕರ್ಫ್ಯೂ ಉಲ್ಲಂಘನೆ: ಲೂಟಿ–ಗೋಲಿಬಾರ್
ಹೈದರಾಬಾದ್, ಜ. 22– ಪ್ರತ್ಯೇಕ ಆಂಧ್ರ ಚಳವಳಿಯ ಕೇಂದ್ರವಾದ ವಿಜಯವಾಡದಲ್ಲಿ ಇಂದು ಮತ್ತೆ ಉದ್ರಿಕ್ತ ಗುಂಪು ಹೊಸ ಹಿಂಸಾಕಾರ್ಯಗಳಲ್ಲಿ ತೊಡಗಿದಾಗ ಪೊಲೀಸರು ಮತ್ತು ಸೇನಾಪಡೆ ಗುಂಡು ಹಾರಿಸಿದ ಕಾರಣ ಕನಿಷ್ಠಪಕ್ಷ ಎಂಟು ಮಂದಿ ಗಾಯಗೊಂಡರು.
ಗಾಂಧಿನಗರದಲ್ಲಿ ಹಿಂಸಾಚರಣೆಯಲ್ಲಿ ತೊಡಗಿದ್ದ ಗುಂಪು ಚದುರಿಸಲು ಲಾಠಿ ಮತ್ತು ಅಶ್ರುವಾಯು ವಿಫಲವಾದಾಗ ಗುಂಡು ಹಾರಿಸಲಾಯಿತು. ಸಮಾಜಘಾತುಕ ವ್ಯಕ್ತಿಗಳ ಗುಂಪು ಕರ್ಫ್ಯೂ ಆಜ್ಞೆಯನ್ನು ಉಲ್ಲಂಘಿಸಿ, ಟೌನಿನಲ್ಲಿ ಒಂದು ಶ್ರೀಮಂತ ಚಿತ್ರಮಂದಿರ ಮತ್ತು ಅಂಚೆ ಕಚೇರಿಗೆ ಬೆಂಕಿ ಹಚ್ಚಿತೆಂದು ವರದಿಯಾಗಿದೆ. ಅಲ್ಲದೆ ಉದ್ರಿಕ್ತ ಗುಂಪು ಹಲವಾರು ಕಡೆ ಲೂಟಿ ಸಹ ಮಾಡಿತೆಂದೂ ತಿಳಿದುಬಂದಿದೆ.
ನೈಜೀರಿಯಾದಲ್ಲಿ ವಿಮಾನ ಅಪಘಾತ: 192 ಸಾವು
ಲೇಗಾಸ್, ಜ. 22– ಮೆಕ್ಕಾದಿಂದ 202 ಜನ ಮುಸ್ಲಿಂ ಯಾತ್ರಾರ್ಥಿಗಳನ್ನು ಕರೆತರುತ್ತಿದ್ದ
ಜೋರ್ಡಾನಿನ ಬೋಯಿಂಗ್–707 ವಿಮಾನ ವೊಂದು ಇಂದು ಉತ್ತರ ನೈಜೀರಿಯಾದಲ್ಲಿ ಅಪಘಾತಕ್ಕೀಡಾಗಿ ವಿಮಾನದಲ್ಲಿದ್ದ 192 ಜನ ಪ್ರಯಾಣಿಕರು ಸತ್ತರೆಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಕಾನೊನಗರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಾಗ ವಿಮಾನವು ರನ್ವೇಯಿಂದ ಸರಿದು ಹತ್ತಿಕೊಂಡು ಉರಿಯತೊಡಗಿತು ಎಂದು ಅಧಿಕಾರಿಗಳು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.