‘ರಾಷ್ಟ್ರಭಕ್ತಿ... ಆದರೆ ನೆಲದ ದಾಹವಲ್ಲ’
ಮಾಸ್ಕೊ, ಡಿ. 29– ಭಾರತ– ಪಾಕಿಸ್ತಾನ ಯುದ್ಧ ತಲೆದೋರಿದ ಸಂದರ್ಭದಲ್ಲಿ ಭಾರತದಲ್ಲಿ ಏಕತೆ ಮತ್ತು ರಾಷ್ಟ್ರಭಕ್ತಿಯ ಉತ್ಸಾಹ ಎಲ್ಲೆಲ್ಲೂ ಕಂಡುಬಂದಿತೇ ವಿನಾ ಅನ್ಯಾಕ್ರಮಣಶೀಲವಾದ ಸ್ವದೇಶಪ್ರೇಮ ಕಂಡುಬರಲಿಲ್ಲ. ಯುದ್ಧಾ ನಂತರ ಭಾರತದ ರಾಜಕೀಯ ಪರಿಸ್ಥಿತಿ ಬಗ್ಗೆ ‘ಪ್ರಾವ್ಡಾ’ ಪತ್ರಿಕೆಯ ದೆಹಲಿ ವರದಿಗಾರರು ಈ ಮಾತನ್ನು ತಿಳಿಸಿದ್ದಾರೆ.
ಪಾಕಿಸ್ತಾನದ ಭೂಪ್ರದೇಶದ ದಾಹ ತನಗಿಲ್ಲ ಎಂದು ಭಾರತ ಸರ್ಕಾರ ಪದೇಪದೇ ಒತ್ತಿ ಹೇಳಿದ್ದು ರಾಷ್ಟ್ರಭಕ್ತಿಯ ಉತ್ಸಾಹದ ಆರೋಗ್ಯಕರ ವಾತಾವರಣ ಸೃಷ್ಟಿಗೆ ಕಾರಣವಾಯಿತು. ಇದು ಯುದ್ಧೋನ್ಮಾದ ಮತ್ತು ಅನ್ಯಾಕ್ರಮಣಶೀಲವಾದ ಸ್ವದೇಶ ಪ್ರೇಮಕ್ಕೆ ಎಡೆಕೊಡಲ್ಲ ಎಂದು ಅವರು ಹೇಳಿದ್ದಾರೆ.
ಬಲಪಂಥೀಯ ರಾಷ್ಟ್ರೀಯ ಪಕ್ಷಗಳು ಅನ್ಯಾಕ್ರಮಣಶೀಲ ಸ್ವದೇಶಪ್ರೇಮವನ್ನು ಪ್ರಚೋದಿಸಲು ಯತ್ನಿಸಿದವಾದರೂ ಅದು ಒಟ್ಟಾರೆ ಫಲಪ್ರದವಾಗಲಿಲ್ಲ. ಭಾರತೀಯ ಜನತೆ ಭದ್ರತೆ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳ ಬಗ್ಗೆ ಸರ್ಕಾರಕ್ಕೆ ಒಗ್ಗಟ್ಟಿನ ಅಪೂರ್ವ ಬೆಂಬಲ ನೀಡಿತು ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.