ಆಂತರಿಕ ಕಲಹವೇ ವಿರೋಧ ಪಕ್ಷಗಳ ಪರಾಭವಕ್ಕೆ ಕಾರಣ
ನವದೆಹಲಿ, ಏ. 1– ಕಮ್ಯುನಿಸ್ಟ್ ಪಕ್ಷದ ವಿನಾ ಉಳಿದೆಲ್ಲ ವಿರೋಧ ಪಕ್ಷಗಳೂ ಚುನಾವಣೆ ಫಲಿತಾಂಶದ ಬಗ್ಗೆ ತೀವ್ರವಾಗಿ ಹತಾಶಗೊಂಡಿವೆ. ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಎಂದಿಗೂ ಸೋಲಿಸಲು ಸಾಧ್ಯವೇ ಇಲ್ಲ ಎಂಬುದು ಅವುಗಳ ಅಭಿಪ್ರಾಯ. ಎಲ್ಲಕ್ಕಿಂತ ಹೆಚ್ಚಾಗಿ, ವಿಧಾನಸಭೆಗಳಲ್ಲಿ ಅಥವಾ ಸಂಸತ್ತಿನಲ್ಲಿ ತಮ್ಮ ಪಕ್ಷಗಳ ಪ್ರಾತಿನಿಧ್ಯ ಹೆಚ್ಚುವ ಸಾಧ್ಯತೆಯೇ ಇಲ್ಲ ಎಂದು ಭಾವಿಸಿವೆ.
ಈ ಹತಾಶ ಸ್ಥಿತಿಯಲ್ಲಿರುವ ವಿರೋಧ ಪಕ್ಷಗಳು– ಅದರಲ್ಲೂ ಜನಸಂಘದ ವಕ್ತಾರರು, ‘ಈಚಿನ ಚುನಾವಣೆಗಳು ನ್ಯಾಯಸಮ್ಮತವಾಗಿ ನಡೆದಿವೆಯೇ?’ ಎಂದು ಪ್ರಶ್ನಿಸಿವೆ.
ಏಪ್ರಿಲ್ ಫೂಲ್
ನವದೆಹಲಿ, ಏ. 1– ‘ಎರ್ ಇಂಡಿಯಾ ಮಹಾರಾಜರಿಗೂ’ ಇಂದು ‘ಏಪ್ರಿಲ್ ಫೂಲ್‘ ಬಿಸಿತಾಕಿತು.
ಪ್ರಯಾಣಕ್ಕೆ ಸಿದ್ಧವಾದ ವಿಮಾನದಲ್ಲಿ ಬಾಂಬ್ ಇರುವುದಾಗಿ ಇಂದು ದೆಹಲಿ ವಿಮಾನ ನಿಲ್ದಾಣದ ಏರ್ ಇಂಡಿಯಾ ಕಚೇರಿಗೆ ಯಾರೋ ಫೋನ್ ಮಾಡಿದರು.
ಮುಂಬೈ, ಢಾಕಾ, ನ್ಯೂಯಾರ್ಕ್ ಮತ್ತು ಲಂಡನ್ಗೆ ಹೊರಡಲಿದ್ದ 4 ವಿಮಾನಗಳಲ್ಲಿ ಕೂಡಲೇ ಶೋಧನೆ ಆರಂಭಿಸಲಾಯಿತು. ಆದರೆ ಯಾವುದೇ ಬಾಂಬ್ ಸಿಗಲಿಲ್ಲ. ಪರಿಣಾಮವಾಗಿ ವಿಮಾನಗಳು ಹೊರಡುವುದು 2 ಗಂಟೆ ತಡವಾಯಿತು.
‘ಇಂದು ಏಪ್ರಿಲ್ ಒಂದನೇ ತಾರೀಕು’ ಎಂದು ಆನಂತರ ವಿಮಾನ ಸಂಸ್ಥೆ ವಕ್ತಾರರೊಬ್ಬರು ನಿಟ್ಟುಸಿರುಬಿಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.