ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ| ಮಂಗಳವಾರ, 26–1–1971

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 17:08 IST
Last Updated 25 ಜನವರಿ 2021, 17:08 IST
   

ವ್ಯಕ್ತಿನಿಂದೆ, ದ್ವೇಷ, ಹಿಂಸಾಚಾರ ತ್ಯಜಿಸಲು ರಾಷ್ಟ್ರಪತಿ ಕರೆ

ನವದೆಹಲಿ, ಜ. 25– ಚುನಾವಣೆ ಪ್ರಚಾರಗಳಲ್ಲಿ ವ್ಯಕ್ತಿನಿಂದೆ, ದ್ವೇಷ ಮತ್ತು ಹಿಂಸಾಕೃತ್ಯಗಳನ್ನು ತ್ಯಜಿಸಿ ಎಂದು ರಾಷ್ಟ್ರಪತಿ ವಿ.ವಿ ಗಿರಿಯವರು ಇಂದು ರಾಷ್ಟ್ರದ ಮತದಾರರಿಗೆ ತಮ್ಮ ರಾಜಕೀಯ ಪಕ್ಷಗಳಿಗೆ ಮನವಿ ಮಾಡಿಕೊಂಡರು.

ಗಣರಾಜ್ಯೋತ್ಸವದ ಮುನ್ನಾ ದಿನವಾದ ಇಂದು ರಾತ್ರಿ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ ಗಿರಿಯವರು, ರಾಜಕೀಯ ಹೊಂದಾಣಿಕೆಗಳಿಂದ ಆರ್ಥಿಕ ಸಂಕಷ್ಟಗಳ ನಿವಾರಣೆಯಾಗದು ಎಂದರು.

ADVERTISEMENT

ಗಣರಾಜ್ಯೋತ್ಸವ: ಗಂಗೂಬಾಯಿ, ಶಾಂತಾರಾವ್‌, ವಿಶ್ವನಾಥ್‌ರಿಗೆ ಪ್ರಶಸ್ತಿ

ನವದೆಹಲಿ, ಜ. 25– ಈ ವರ್ಷದ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಅಸ್ಸಾಂ ರಾಜ್ಯದ ಮಾಜಿ ಮುಖ್ಯಮಂತ್ರಿ ಶ್ರೀ ಬಿ.ಪಿ. ಚಾಲಿಹಾ, ಗಾಯಕ ಉಸ್ತಾದ್‌ ಅಲ್ಲಾವುದ್ದೀನ್‌ ಖಾನ್‌ ಮತ್ತು ನೃತ್ಯ ಕಲಾವಿದ ಉದಯಶಂಕರ್‌ ಅವರೂ ಸೇರಿ ಆರು ಮಂದಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ. ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯಾದ ‘ಭಾರತ ರತ್ನ’ ಪ್ರಶಸ್ತಿಯನ್ನು ಈ ಬಾರಿ ಯಾರಿಗೂ ಕೊಡಲಾಗಿಲ್ಲ.

ಪದ್ಮಭೂಷಣ ಪ್ರಶಸ್ತಿ ವಿಜೇತರು: ಮೈಸೂರು ರಾಜ್ಯದ ಗಾಯಕಿ ಗಂಗೂಬಾಯಿ ಹಾನಗಲ್, ಡಿ.ಕೆ. ಪಟ್ಟಮ್ಮಾಳ್‌, ವ್ಯಂಗ ಚಿತ್ರಕಾರ ಆರ್‌.ಕೆ.ಲಕ್ಷ್ಮಣ್‌, ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ಡೈರೆಕ್ಟರ್‌ ಡಾ. ಸತೀಶ್‌ ಧವನ್‌ ಹಾಗೂ ಮತ್ತಿತರರು.

ಪದ್ಮಶ್ರೀ ಪ್ರಶಸ್ತಿ ವಿಜೇತರು: ಕ್ರಿಕೆಟ್‌ ಆಟಗಾರ ಜಿ.ಆರ್‌. ವಿಶ್ವನಾಥ್‌, ನೃತ್ಯ ಕಲಾವಿದೆ ಶಾಂತಾರಾವ್‌, ಹಿಂದಿ ಗಾಯಕ ಮನ್ನಾಡೆ ಹಾಗೂ ಇತರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.