ಭಾರತ– ಚೀನಾ ಮೈತ್ರಿ ವೃದ್ಧಿ ಹಾರೈಸಿ ಇಂದಿರಾಗೆ ಚೌ ಸಂದೇಶ
ನವದೆಹಲಿ, ನ. 14– ಭಾರತ ಮತ್ತು ಚೀನಾಗಳ ಜನರ ನಡುವೆ ಮೈತ್ರಿ, ‘ನಿತ್ಯವೂ ಬೆಳೆದು ಅಭಿವೃದ್ಧಿ’ಯಾಗುವುದು ಎಂಬ ಆಶಯವನ್ನು ವ್ಯಕ್ತಪಡಿಸಿ ಚೀನೀ ಪ್ರಧಾನಿ ಚೌ ಎನ್–ಲೈ ಅವರು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರಿಗೆ ಸಂದೇಶವೊಂದನ್ನು ಕಳುಹಿಸಿದ್ದಾರೆ.
ನವೆಂಬರ್ 13ನೇ ತಾರೀಖಿನ ಈ ಸಂದೇಶ ಇಂದು ಇಲ್ಲಿಗೆ ತಲುಪಿದೆ. ವಿಶ್ವಸಂಸ್ಥೆಗೆ ಚೀನಾ ಪ್ರವೇಶಿಸಿದ್ದಕ್ಕಾಗಿ ಭಾರತದ ಅಭಿನಂದನೆಗಳನ್ನು ತಿಳಿಸುವ ಶ್ರೀಮತಿ ಗಾಂಧಿ ಅವರ ಕೇಬಲ್ಗೆ ಈ ಸಂದೇಶ ಉತ್ತರವಾಗಿದೆ.
ಚೌ ಎನ್–ಲೈ ಅವರಿಗೆ ಶ್ರೀಮತಿ ಗಾಂಧಿ ಅವರು ವಿಯನ್ನಾದಿಂದ ಈ ಕೇಬಲ್ಗಳನ್ನು ಕಳುಹಿಸಿದ್ದರು.
ಪ್ರಜಾಪ್ರಭುತ್ವದಲ್ಲಿ ಕೆಟ್ಟ ಮೇಲ್ಪಂಕ್ತಿ: ನಾಯಕರ ಟೀಕೆ
ನವದೆಹಲಿ, ನ. 14– ಇಲ್ಲಿನ ಜಂತರ್ ಮಂತರ್ ರಸ್ತೆಯಲ್ಲಿ ಸಂಸ್ಥಾ ಕಾಂಗ್ರೆಸ್ ವಶದಲ್ಲಿದ್ದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಕಚೇರಿಯ ಮೇಲೆ ಆಡಳಿತ ಕಾಂಗ್ರೆಸಿನ ಕೆಲವು ಮಂದಿ ಅಧಿಕಾರ ವರ್ಗದವರು ಮತ್ತು ಕಾರ್ಯಕರ್ತರು ಶನಿವಾರ ದಾಳಿ ಮಾಡಿ, ಅದನ್ನು ಬಲಾತ್ಕಾರದಿಂದ ಸ್ವಾಧೀನ ಪಡಿಸಿಕೊಂಡುದಕ್ಕಾಗಿ ಪ್ರಮುಖ ರಾಜಕೀಯ ನಾಯಕರು ಇಂದು ಖಂಡಿಸಿದ್ದಾರೆ.
ಕಾಂಗ್ರೆಸಿನ ಹೆಸರು ಮತ್ತು ಆಸ್ತಿಯ ಪ್ರಶ್ನೆ ಸಿವಿಲ್ ನ್ಯಾಯಾಲಯವೊಂದರಿಂದ ಮಾತ್ರವೇ ತೀರ್ಮಾನವಾಗ ತಕ್ಕದ್ದು ಎಂದು ‘ಚುನಾವಣೆ ಸಂಕೇತ’ದ ಮೊಕದ್ದಮೆಯಲ್ಲಿ ಸುಪ್ರೀಂ ಕೋರ್ಟು ಸ್ಪಷ್ಟವಾಗಿ ತಿಳಿಸಿರುವ ಅಂಶಗಳಿಗೆ ಈ ದಾಳಿ ಹೊಂದಿಕೆಯಾಗಿದೆಯೆ, ಸಮಂಜಸವಾಗಿದೆಯೆ ಎಂದು ಆಚಾರ್ಯ ಕೃಪಲಾನಿ ಅವರು ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.